ಸುದ್ದಿಗಳು

ಗಂಗೂಬಾಯಿ ಕಾಥೇವಾಡಿ: ತಮ್ಮ ಏರಿಯಾವನ್ನು ಕೆಂಪುದೀಪವೆಂದು ತೋರಿಸಿರುವುದರ ವಿರುದ್ಧ ಕಾಮಾಟಿಪುರ ನಿವಾಸಿಗಳ ಅಳಲು

Bar & Bench

ಆಲಿಯಾ ಭಟ್‌ ನಟನೆಯ ಗಂಗೂಭಾಯಿ ಕಾಥೇವಾಡಿ ಸಿನಿಮಾದ ವಿರುದ್ಧ ದಕ್ಷಿಣ ಮುಂಬೈನ ಕಾಮಾಟಿಪುರದ ನಿವಾಸಿಗಳು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು, ಸಿನಿಮಾದಲ್ಲಿ ತಾವು ವಾಸಿಸುವ ಸ್ಥಳದ ಉಲ್ಲೇಖವಿರುವುದನ್ನು ತೆಗೆದು ಹಾಕಬೇಕು ಎಂದು ಈ ನಿವಾಸಿಗಳು ಕೋರಿದ್ದಾರೆ.

ಸಿನಿಮಾದ ಟ್ರೇಲರ್‌ ಬಿಡುಗಡೆಯಾದ ನಂತರ ತಮ್ಮ ವಸತಿಸ್ಥಳದ ಘನತೆಗೆ ಕುಂದುಂಟಾಗಿದೆ. ಸಿನಿಮಾದಲ್ಲಿ ತಮ್ಮ ಇಡೀ ಏರಿಯಾವನ್ನು ಕೆಂಪುದೀಪದ ಪ್ರದೇಶವೆನ್ನುವಂತೆ ನಿಂದನೀಯವಾಗಿ, ಕಟುವಾಗಿ ಚಿತ್ರಿಸಲಾಗಿದೆ ಎನ್ನುವುದು ನಿವಾಸಿಗಳ ಆರೋಪವಾಗಿದೆ.

ಸಿನಿಮಾಗೆ ಸೆನ್ಸಾರ್‌ ಮಂಡಳಿಯು ಅನುಮತಿ ನೀಡಿರುವುದಕ್ಕೆ ಅರ್ಜಿದಾರರು ತಕರಾರು ಎತ್ತಿದ್ದಾರೆ. ಪ್ರಕರಣದ ಸಂಬಂಧದ ಅರ್ಜಿ ವಿಚಾರಣೆಯನ್ನು ನ್ಯಾ. ಜಿ ಎಸ್‌ ಪಟೇಲ್‌ ನೇತೃತ್ವದ ಪೀಠವು ಬುಧವಾರ ನಡೆಸಲಿದೆ. ಮಹಿಳಾ ನಿವಾಸಿಯೊಬ್ಬರು ಸ್ಥಳೀಯ 55 ನಿವಾಸಿಗಳ ಪರವಾಗಿ ಅರ್ಜಿ ದಾಖಲಿಸಿದ್ದಾರೆ.

ಇದಲ್ಲದೆ ಸ್ಥಳೀಯ ಕಾಂಗ್ರೆಸ್‌ ಶಾಸಕ ಅಮೀನ್‌ ಪಟೇಲ್‌ ಅವರು ಸಹ ಚಿತ್ರದಲ್ಲಿ ಕಾಮಾಟಿಪುರವನ್ನು ಕೆಟ್ಟದಾಗಿ ತೋರಿಸಿರುವ ಬಗ್ಗೆ ಪಿಐಎಲ್‌ ದಾಖಲಿಸಿದ್ದಾರೆ.

ಮಹಿಳಾ ಅರ್ಜಿದಾರರ ತಕರಾರೇನು?

ಚಿತ್ರದ ಪರಿಣಾಮವಾಗಿ ಈ ಪ್ರದೇಶದಲ್ಲಿ ವಾಸಿಸುವ ಎಲ್ಲ ಯುವತಿಯರಿಗೆ ವೇಶ್ಯೆಯರು ಎಂದು ಹಣೆಪಟ್ಟಿ ಹಚ್ಚುವ, ಅವರನ್ನು ರೇಗಿಸುವ, ಕಿರುಕುಳ ನೀಡುವ ಪ್ರವೃತ್ತಿಗೆ ಕಾರಣವಾಗಲಿದೆ. ಇಲ್ಲಿ ವಾಸಿಸುವ ನಿವಾಸಿಗಳ ಘನತೆಗೆ ಚ್ಯುತಿ ಬರಲಿದೆ.

ನ್ಯಾಯ, ಸಮಾನತೆಗಳನ್ನು ಚಿತ್ರವು ಉಲ್ಲಂಘಿಸಿದೆ. ಹಾಗಾಗಿ, ಚಿತ್ರದ ಬಿಡುಗಡೆಗೆ ತಡೆ ನೀಡಬೇಕು. ಚಿತ್ರದಲ್ಲಿ ಕಾಮಾಟಿಪುರ ಎನ್ನುವ ಉಲ್ಲೇಖಗಳನ್ನು ಕೈಬಿಡಲು ಸೆನ್ಸಾರ್‌ ಮಂಡಳಿಗೆ ಸೂಚಿಸಬೇಕು.