Religions, Kerala High Court
Religions, Kerala High Court  
ಸುದ್ದಿಗಳು

ʼಪ್ರಗತಿಪರ ಸರ್ಕಾರʼ ಧಾರ್ಮಿಕೇತರ ವರ್ಗಕ್ಕೆ ಸೇರಿದವರಿಗೆ ಇಡಬ್ಲ್ಯೂಎಸ್ ಪ್ರಯೋಜನ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

Bar & Bench

ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್‌) ಮೀಸಲಾದ ಪ್ರಯೋಜನಗಳನ್ನು ಪಡೆಯಲು ಧಾರ್ಮಿಕೇತರ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಸಮುದಾಯ ಪ್ರಮಾಣಪತ್ರ ನೀಡುವುದಕ್ಕಾಗಿ ತ್ವರಿತವಾಗಿ ನೀತಿಯೊಂದನ್ನು ರೂಪಿಸುವಂತೆ ಕೇರಳ ಹೈಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. [ನಿರುಪಮಾ ಪದ್ಮಕುಮಾರ್‌ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಗತಿಪರ ಎಂದು ಕರೆದುಕೊಳ್ಳುವ ಸರ್ಕಾರ ಯಾವುದೇ ಸಮುದಾಯ ಅಥವಾ ಜಾತಿಗೆ ಸೇರಿಲ್ಲ ಎಂಬ ಕಾರಣಕ್ಕಾಗಿ ಧಾರ್ಮಿಕೇತರ ವರ್ಗಕ್ಕೆ ಸೇರಿದವರಿಗೆ ಇಡಬ್ಲ್ಯೂಎಸ್‌ ಪ್ರಯೋಜನ ನಿರಾಕರಿಸುವಂತಿಲ್ಲ. ತಮ್ಮನ್ನು ತಾವು ಧರ್ಮಾತೀತರು ಎಂದು ಘೋಷಿಸಿಕೊಂಡಿರುವ ಅರ್ಜಿದಾರರ ರೀತಿಯ ವ್ಯಕ್ತಿಗಳಿಗೆ ಇಡಬ್ಲ್ಯೂಎಸ್‌ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ಹೇಳಿದ್ದಾರೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಬಾರದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್) ಸೇರಿರುವ ಹನ್ನೆರಡನೇ ತರಗತಿಯಲ್ಲಿ ಉತ್ತೀರ್ಣರಾಗಿ ಕಾಲೇಜು ಪ್ರವೇಶಾತಿ ವೇಳೆ ತಮ್ಮನ್ನು ತಾವು ಧಾರ್ಮಿಕೇತರ ವರ್ಗಕ್ಕೆ ಸೇರಿದವರು ಎಂದು ಘೋಷಿಸಿಕೊಂಡ ಹಲವು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣೆ ವೇಳೆ ಉಳಿದೆಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಧಾರ್ಮಿಕೇತರ ವರ್ಗಕ್ಕೆ ಸೇರಿದವರಿಗೆ ಪ್ರಮಾಣ ಪತ್ರಗಳನ್ನು ನೀಡಲು ಪ್ರತಿವಾದಿಗಳಿಗೆ ಪೀಠ ನಿರ್ದೇಶಿಸಿತು.

“ಅರ್ಜಿದಾರರು ಇತರೆ ಅವಶ್ಯಕತೆಗಳನ್ನು ಪೂರೈಸಿದರೆ ಎಸ್‌ಸಿ/ಎಸ್‌ಟಿ/ಒಬಿಸಿ ಹೊರತುಪಡಿಸಿ ಇತರ ಸಮುದಾಯಗಳಿಗೆ ಸೇರಿದ ಇಡಬ್ಲ್ಯೂಎಸ್‌ ವಿದ್ಯಾರ್ಥಿಗಳಿಗೆ ಲಭ್ಯವಿರುವ ಶೇ 10ರಷ್ಟು ಮೀಸಲಾತಿ ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅರ್ಜಿದಾರರಿಗೆ ಧಾರ್ಮಿಕೇತರ ವರ್ಗದಲ್ಲಿ ಪ್ರಮಾಣಪತ್ರ ನೀಡಬೇಕು” ಎಂದು ನ್ಯಾಯಾಲಯ ಆದೇಶಿಸಿತು.