Justice V Kameswar Rao and Justice Anoop Kumar Mendiratta
Justice V Kameswar Rao and Justice Anoop Kumar Mendiratta  
ಸುದ್ದಿಗಳು

ಸರ್ಕಾರಿ ನೌಕರರಿಗೆ ಸಂಘ, ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕಿದೆ: ದೆಹಲಿ ಹೈಕೋರ್ಟ್

Bar & Bench

ಸಂಘ, ಒಕ್ಕೂಟ ಅಥವಾ ಸಹಕಾರ ಸಂಘಗಳನ್ನು ರಚಿಸುವ ಮೂಲಭೂತ ಹಕ್ಕಿನಿಂದ ಸರ್ಕಾರಿ ನೌಕರರನ್ನು ಹೊರಗಿಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿತು, ಆದರೆ ಅಂತಹ ಸಂಘಗಳಿಗೆ ಸರ್ಕಾರದ ಮಾನ್ಯತೆ ಪಡೆಯುವುದು ಮೂಲಭೂತ ಹಕ್ಕಲ್ಲ ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ [ಕೇಂದ್ರೀಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳ ಸಂಘ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇಂದ್ರ ನಾಗರಿಕ ಸೇವೆಗಳ (ಸೇವಾ ಸಂಘಗಳ ಮಾನ್ಯತೆ) ನಿಯಮಗಳ ಪ್ರಾಥಮಿಕ ಉದ್ದೇಶ, ಸರ್ಕಾರ ಮತ್ತು ಅದರ ನೌಕರರ ನಡುವೆ ಮಾತುಕತೆಗಳನ್ನು ಸಕ್ರಿಯಗೊಳಿಸಲು ಮತ್ತು ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳಲು ಕಾನೂನುಬದ್ಧ ಸಂಘಟನೆಯ ಚಟುವಟಿಕೆಗಳನ್ನು ಉತ್ತೇಜಿಸುವುದು ಮತ್ತು ಯಾವುದೇ ಸೇವಾ ಸಂಘಗಳಿಗೆ ಮಾನ್ಯತೆ ನೀಡುವುದಾಗಿದೆ ಎಂದು ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್ ಮತ್ತು ಅನೂಪ್ ಕುಮಾರ್ ಮೆಂಡಿರಟ್ಟ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

"ಭಾರತದ ಸಂವಿಧಾನದ 19 ನೇ ವಿಧಿಯ ಪ್ರಕಾರ ಸ್ವಾತಂತ್ರ್ಯದ ನಿರ್ಬಂಧಗಳಿಗೆ ಒಳಪಟ್ಟು ಸರ್ಕಾರಿ ನೌಕರರು ಸಾರ್ವಜನಿಕ ಸೇವಕರಾಗಿ ಕರ್ತವ್ಯ ನಿರ್ವಹಿಸಬೇಕಾದರೂ  ಸಂವಿಧಾನದ ಭಾಗ IIIರಡಿ ಒದಗಿಸಲಾದ ಹಕ್ಕುಗಳ ರಕ್ಷಣೆಯಿಂದ ಅವರನ್ನು ಹೊರಗಿಡುವಂತಿಲ್ಲ. ಭಾರತ ಸಂವಿಧಾನದ ಪರಿಚ್ಛೇದ 19(1)(ಸಿ) ಅಡಿ ಸಂಘ ಇಲ್ಲವೇ ಒಕ್ಕೂಟ ಅಥವಾ ಸಹಕಾರ ಸಂಘಗಳಿಗೆ ಸರ್ಕಾರ ಮಾನ್ಯತೆ ನೀಡುವುದು ಮೂಲಭೂತ ಹಕ್ಕಾಗಿ ಇರದೇ ಹೋದರೂ ಅವುಗಳನ್ನು ರಚಿಸುವುದು ಮೂಲಭೂತ ಹಕ್ಕಾಗಿದೆ” ಎಂದು ನ್ಯಾಯಾಲಯ ವಿವರಿಸಿದೆ.

ಕೇಂದ್ರ ಲೋಕೋಪಯೋಗಿ ಎಂಜಿನಿಯರ್‌ಗಳ ಒಕ್ಕೂಟವು ಕೇಂದ್ರ ಆಡಳಿತ ನ್ಯಾಯಮಂಡಳಿಯ ಆದೇಶವೊಂದರ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನ್ಯಾಯಾಲಯವು ಈ ಪ್ರಮುಖ ಅವಲೋಕನಗಳನ್ನು ಮಾಡಿತು.