Mysore Urban Development Authority & CM Siddaramaiah 
ಸುದ್ದಿಗಳು

ಸಿಎಂ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ: ಹೈಕೋರ್ಟ್‌ಗೆ ಕೇವಿಯಟ್‌ ಸಲ್ಲಿಕೆ

Bar & Bench

ಮುಡಾ ಪ್ರಕರಣದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ನೀಡಿರುವ ಅಭಿಯೋಜನಾ ಮಂಜೂರಾತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದರೆ ತಮ್ಮ ವಾದವನ್ನೂ ಆಲಿಸಬೇಕು ಎಂದು ಕೇವಿಯಟ್‌ ಸಲ್ಲಿಕೆಯಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವ ಬೆಂಗಳೂರಿನ ನಾಗರಭಾವಿಯ ಎಸ್‌ ಪಿ ಪ್ರದೀಪ್‌ ಕುಮಾರ್‌ ಅವರು ವಕೀಲ ಎಂ ಎಚ್‌ ಪ್ರಕಾಶ್‌ ಅವರ ಮೂಲಕ ಕೇವಿಯಟ್‌ ಅರ್ಜಿಯನ್ನು ಇಂದು ಸಲ್ಲಿಸಿದ್ದಾರೆ.

“ರಾಜ್ಯಪಾಲರು ನೀಡಿರುವಅಭಿಯೋಜನಾ ಮಂಜೂರಾತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅವರು ಸಲ್ಲಿಸುವ ಅರ್ಜಿಯ ಕುರಿತು ನಿರ್ಧರಿಸುವಾಗ ನಮ್ಮ ವಾದವನ್ನೂ ಆಲಿಸಬೇಕು. ಆನಂತರ ಪ್ರಕರಣವನ್ನು ನಿರ್ಧರಿಸಬೇಕು” ಎಂಬುದು ಕೇವಿಯಟ್‌ನಲ್ಲಿ ಕೋರಿಕೆಯಾಗಿದೆ.

ಸಾಮಾಜಿಕ ಕಾರ್ಯಕರ್ತರಾದ ಟಿ ಜೆ ಅಬ್ರಹಾಂ‌, ಮೈಸೂರಿನ ಸ್ನೇಹಮಯಿ ಕೃಷ್ಣ ಮತ್ತು ಮತ್ತು ಬೆಂಗಳೂರಿನ ಪ್ರದೀಪ್ ಕುಮಾರ್‌ ಎಸ್‌ ಪಿ ಅವರು ಅಭಿಯೋಜನಾ ಮಂಜೂರಾತಿ ಕೋರಿದ್ದರು.

ಈ ಹಿನ್ನೆಲೆಯಲ್ಲಿ “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಭ್ರಷ್ಟಾಚಾರ ನಿರೋಧ ಕಾಯಿದೆ ಸೆಕ್ಷನ್‌ 17 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 218ರ ಅಡಿ ಸಕ್ಷಮ ಪ್ರಾಧಿಕಾರದ ನಿರ್ಧಾರವನ್ನು ರಾಜ್ಯಪಾಲರ ನಿರ್ದೇಶನದಂತೆ ಲಗತ್ತಿಸಿದ್ದೇನೆ” ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್‌ ಪ್ರಭುಶಂಕರ್‌ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಇಂದು ಬೆಳಿಗ್ಗೆ ಪತ್ರ ಕಳುಹಿಸಿದ್ದರು.