Vikash Kumar & HC 
ಸುದ್ದಿಗಳು

ವಿಕಾಸ್‌ ಅಮಾನತು ರದ್ದುಗೊಳಿಸಿದ್ದ ಆದೇಶದ ವಿರುದ್ಧ ರಾಜ್ಯ ಸರ್ಕಾರದ ಮೇಲ್ಮನವಿ; ಹೈಕೋರ್ಟ್‌ನಲ್ಲಿ ನಾಳೆ ವಿಚಾರಣೆ

ವಿಚಾರಣೆ ಆರಂಭವಾಗುತ್ತಿದ್ದಂತೆ ಎಜಿ ಕೆ ಶಶಿಕಿರಣ್‌ ಶೆಟ್ಟಿ ಅವರು ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠದ ಮುಂದೆ ಉಲ್ಲೇಖಿಸಿ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ಕೋರಿದರು.

Bar & Bench

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು (ಸಿಎಟಿ) ವಜಾಗೊಳಿಸಿರುವುದನ್ನು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಪ್ರಶ್ನಿಸಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠದ ಮುಂದೆ ಉಲ್ಲೇಖಿಸಿ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ಕೋರಿದರು.

ಆಗ ಪೀಠವು ಅರ್ಜಿಯಲ್ಲಿನ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿ, ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಜೂನ್‌ 4ರಂದು ಪೊಲೀಸ್‌ ಮಹಾನಿರ್ದೇಶಕರ ವರದಿ ಆಧರಿಸಿ, ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆದಿದ್ದು, ಅದರ ದಾಖಲೆಗಳನ್ನು ಆಧರಿಸಿ, ನ್ಯಾಯ ಮಂಡಳಿಯ ಮುಂದೆ ಸಾಕ್ಷಿ ಇತ್ತೇನೋ ಎಂಬಂತೆ ಆಕ್ಷೇಪಾರ್ಹವಾದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಿಎಟಿಗೆ ಮುಚ್ಚಿದ ಲಕೋಟೆಯಲ್ಲಿ ಜೂನ್‌ 3 ಮತ್ತು 4ರಂದು ನಡೆದಿರುವ ಘಟನೆಯ ಮಾಹಿತಿಯನ್ನು ಸಲ್ಲಿಕೆ ಮಾಡಲಾಗಿದೆ. ಅದನ್ನು ಪರಿಗಣಿಸದೇ ಸಿಎಟಿ ಆದೇಶ ಮಾಡಿದೆ. ಮ್ಯಾಜಿಸ್ಟೀರಿಯಲ್‌ ತನಿಖೆ ಮತ್ತು ನ್ಯಾಯಾಂಗ ತನಿಖಾ ಆಯೋಗ ರಚಿಸಿರುವುದನ್ನು ಸಿಎಟಿಯು ತಪ್ಪಾಗಿ ಅರ್ಥೈಸಿದ್ದು, ಸರ್ಕಾರವು ಕಾಲ್ತುಳಿತಕ್ಕೆ ಯಾರು ಕಾರಣ ಎಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ ಎಂದು ಹೇಳಿದೆ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಸಿಎಟಿ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಘಟನೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಕೇಂದ್ರ ಸರ್ಕಾರವು ವಿಕಾಸ್‌ ಕುಮಾರ್‌ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದೆ. ಇದು ಸಿಎಟಿಯಲ್ಲಿ ತೀರ್ಪು ಕಾಯ್ದಿರಿಸಿದ ಬಳಿಕ ನಡೆದಿರುವ ಘಟನೆಯಾಗಿದ್ದು, ಅದನ್ನು ಮೆಮೊದ ಮೂಲಕ ಸಿಎಟಿ ಗಮನಕ್ಕೆ ತರಲಾಗಿತ್ತು. ಇದನ್ನೂ ಸಿಎಟಿಯು ಪರಿಗಣಿಸಿಲ್ಲ. ಈ ಹಂತದಲ್ಲಿ ಅಧಿಕಾರಿಗಳ ಅಮಾನತನ್ನು ತೆರವು ಮಾಡುವುದರಿಂದ ತನಿಖೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಸಾಕ್ಷಿಗಳ ಪರಿಶೀಲನೆಗೆ ಸಮಸ್ಯೆ ಉಂಟು ಮಾಡಲಿದ್ದು, ಸಾಕ್ಷ್ಯ ತಿರುಚುವ ಸಾಧ್ಯತೆ ಇರುತ್ತದೆ. ಹೀಗಾಗಿ, ಅಧಿಕಾರಿಗಳನ್ನು ಸೇವೆಯಿಂದ ಹೊರಗಿಡುವುದು ಅಗತ್ಯವಾಗಿದೆ ಎಂದು ಎಜಿ ಪೀಠಕ್ಕೆ ವಿವರಿಸಿದರು.

ವಿಕಾಸ್‌ ಕುಮಾರ್‌ ಅವರು ತಮ್ಮ ಅಮಾನತು ಮಾತ್ರ ಬದಿಗೆ ಸರಿಸುವಂತೆ ಕೋರಿದ್ದಾರೆ. ಆದರೆ, ಸಿಎಟಿಯು ವಿಕಾಸ್‌ ಅಲ್ಲದೇ ಐಪಿಎಸ್‌ಯೇತರ ಅಧಿಕಾರಿಗಳ ಅಮಾನತಿಗೂ ಸಂಬಂಧಿಸಿದಂತೆ ಉಲ್ಲೇಖಿಸಿರುವುದರಿಂದ ಇದು ನ್ಯಾಯಾಂಗದ ಮಿತಿಯಾಚೆಗಿನ ನಡೆಯಾಗಿದ್ದು, ಪೂರ್ವಾಗ್ರಹ ಪೀಡಿತವಾದ ವ್ಯಾಪ್ತಿ ಮೀರಿದ ವರ್ತನೆಯಾಗಿದೆ. ಸಿಎಟಿ ಮುಂದೆ ಬಾರದ ಇತರೆ ನಾಲ್ಕು ಅಧಿಕಾರಿಗಳನ್ನು ಪುನಾಃ ಸೇವೆಗೆ ನೇಮಕ ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಿದೆ. ವ್ಯಕ್ತಿಗತ ಮಾಹಿತಿಯನ್ನು ಪರಿಶೀಲಿಸದೇ ಮರು ನಿಯೋಜನೆಗೆ ಸಿಎಟಿ ಶಿಫಾರಸ್ಸು ಮಾಡಿರುವುದು ಅಸಮರ್ಥನೀಯ. ಇದು ಸಿಎಟಿಯ ಪೂರ್ವಾಗ್ರಹಪೀಡಿತ ನಡೆಯಾಗಿದೆ ಎಂದು ಸರ್ಕಾರವು ಆಕ್ಷೇಪಿಸಿದೆ.