Maharaj 
ಸುದ್ದಿಗಳು

'ಮಹಾರಾಜ್' ಚಲನಚಿತ್ರ ಬಿಡುಗಡೆಗೆ ಮಧ್ಯಂತರ ತಡೆ ನೀಡಿದ ಗುಜರಾತ್‌ ಹೈಕೋರ್ಟ್

Bar & Bench

ನಟ ಆಮಿರ್‌ ಖಾನ್ ಅವರ ಪುತ್ರ ಜುನೈದ್ ಖಾನ್ ಅಭಿನಯದ ‘ಮಹಾರಾಜ್’ ಸಿನಿಮಾ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚಲನಚಿತ್ರವು ಜೂನ್ 14 ರಂದು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಬೇಕಿತ್ತು.

ನ್ಯಾಯಮೂರ್ತಿ ಸಂಗೀತಾ ಕೆ ವಿಶೆನ್ ಅವರು ಚಲನಚಿತ್ರದ ಬಿಡುಗಡೆಯನ್ನು ತಡೆಹಿಡಿಯುವ ಮಧ್ಯಂತರ ಆದೇಶವನ್ನು ಹೊರಡಿಸಿದರು. ಜೂನ್ 18 ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದರು.

ಶ್ರೀಕೃಷ್ಣನ ಭಕ್ತರು ಮತ್ತು ಪುಷ್ಟಿಮಾರ್ಗ್ ಪಂಥದ ಅನುಯಾಯಿಗಳ ಪರವಾಗಿ ಸಲ್ಲಿಸಲಾದ ಮನವಿಯ ಮೇರೆಗೆ ಈ ಆದೇಶವನ್ನು ನೀಡಲಾಗಿದೆ.

1862 ರ ಮಾನಹಾನಿ ಪ್ರಕರಣವನ್ನು ಆಧರಿಸಿದ "ಮಹಾರಾಜ್" ಚಲನಚಿತ್ರವು ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ. ಪುಷ್ಟಿಮಾರ್ಗ್‌ ಪಂಥ ಮತ್ತು ಹಿಂದೂ ಧರ್ಮದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಎಂದು ಅರ್ಜಿದಾರರು ವಾದಿಸಿದರು.

ವಸಾಹತುಶಾಹಿ ಆಡಳಿತದ ಬಾಂಬೆಯ ಸುಪ್ರೀಂ ಕೋರ್ಟ್‌ನ ಇಂಗ್ಲಿಷ್ ನ್ಯಾಯಾಧೀಶರು ನಿರ್ಧರಿಸಿದ 1862 ರ ಪ್ರಕರಣವು ಹಿಂದೂ ಧರ್ಮ, ಭಗವಾನ್ ಕೃಷ್ಣ ಮತ್ತು ಭಕ್ತಿಗೀತೆಗಳು ಹಾಗೂ ಸ್ತೋತ್ರಗಳ ಬಗ್ಗೆ ತೀವ್ರ ನಿಂದನಾತ್ಮಕ ಟೀಕೆಗಳನ್ನು ಒಳಗೊಂಡಿದೆ ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪಣೆಯಾಗಿತ್ತು.

ಚಿತ್ರದ ಕಥಾಹಂದರವನ್ನು ಮರೆಮಾಚಲು ಯಾವುದೇ ಟ್ರೇಲರ್ ಅಥವಾ ಪ್ರಚಾರ ಕಾರ್ಯಕ್ರಮಗಳಿಲ್ಲದೆ ಚಿತ್ರದ ಬಿಡುಗಡೆಯನ್ನು ರಹಸ್ಯವಾಗಿ ಮಾಡಲಾಗುತ್ತಿದೆ ಎಂದು ವಿವರಿಸಲಾಯಿತು.

ಚಲನಚಿತ್ರವನ್ನು ಬಿಡುಗಡೆ ಮಾಡುವುದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ಅರ್ಜಿದಾರರು ವಾದಿಸಿದರು. ಚಿತ್ರದ ಬಿಡುಗಡೆಯನ್ನು ತಡೆಯಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತುರ್ತಾಗಿ ಮನವಿ ಮಾಡಿದರೂ ಅವರು ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಲಿಲ್ಲ ಎಂದು ತಿಳಿಸಿದರು.

OTT ಪ್ಲಾಟ್‌ಫಾರ್ಮ್‌ಗಳ ವ್ಯಾಪ್ತಿಯನ್ನು ಮತ್ತು ಪ್ರಪಂಚದಾದ್ಯಂತ ಅದರ ತಕ್ಷಣದ ವ್ಯಾಪಕ ವಿತರಣೆಯನ್ನು ಪರಿಗಣಿಸಿ, ಚಲನಚಿತ್ರದ ಬಿಡುಗಡೆಯಿಂದ ಉಂಟಾದ ಹಾನಿಯನ್ನು ಸರಿಪಡಿಸುವುದು ಅಸಾಧ್ಯವೆನ್ನುವುದು ಅರ್ಜಿದಾರರ ವಾದವಾಗಿತ್ತು.

ಅಂತಿಮವಾಗಿ ನ್ಯಾಯಾಲಯವು, "ವಾದವನ್ನು ಪರಿಗಣಿಸಲಾಗಿದೆ. ಪ್ರತಿವಾದಿಗಳಿಗೆ ನೋಟಿಸ್ ನೀಡಿ, 18.06.2024 ರಂದು ಪ್ರಕರಣವನ್ನು ಪಟ್ಟಿ ಮಾಡಿ" ಎಂದು ನಿರ್ದೇಶಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮಿಹಿರ್ ಜೋಶಿ ಮತ್ತು ವಕೀಲರಾದ ಕೆಯೂರ್ ಗಾಂಧಿ (ವ್ಯವಸ್ಥಾಪಕ ಪಾಲುದಾರ) ಮತ್ತು ಕುನಾಲ್ ವ್ಯಾಸ್ (ಪಾಲುದಾರ) ಗಾಂಧಿ ಲಾ ಅಸೋಸಿಯೇಟ್ಸ್ ವಾದಿಸಿದರು.