ಅಸ್ಸಾಂ ಮುಖ್ಯಮಂತ್ರಿ (ಸಿಎಂ) ಹಿಮಂತ ಬಿಸ್ವಾ ಶರ್ಮಾ ಅವರು ಕಳೆದ ವರ್ಷ ಮಾಡಿದ ಭಾಷಣದಲ್ಲಿ ನೀಡಿದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ಗುವಾಹಟಿ ನ್ಯಾಯಾಲಯ ಶನಿವಾರ ಪೊಲೀಸರಿಗೆ ಸೂಚಿಸಿದೆ.
ಶರ್ಮಾ ಅವರ ಡಿಸೆಂಬರ್ 2021ರ ಭಾಷಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುವುದು ಕಡ್ಡಾಯ ಎಂದು ಕಾಮರೂಪ್ ಮೆಟ್ರೊ ಡಿಸ್ಟ್ರಿಕ್ ಸಬ್ ಡಿವಿಷನಲ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಿ ಬರೂವ ಸೂಚಿಸಿದರು.
ಸೇಡಿನ ಕ್ರಮವಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂತಹ ಭಾಷಣವನ್ನು ಸಿಎಂ ಮಾಡಿದ್ದರು ಎಂದು ಅಸ್ಸಾಂನ ಬಾರ್ಪೇಟಾ ಕ್ಷೇತ್ರದ ಸಂಸದ ಅಬ್ದುಲ್ ಖಲೀಕ್ ಅವರು ಸಲ್ಲಿಸಿದ್ದ ದೂರನ್ನು ಆಧರಿಸಿ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ದುರ್ಬಲವಾಗಿರುವ ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶ ಸಿಎಂ ನೀಡಿದ ಹೇಳಿಕೆಗಳಿಗೆ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಐಪಿಸಿ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 153ಎ (ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯ) ಅಡಿ ಶರ್ಮಾ ವಿರುದ್ಧ ದಿಸ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ಅರ್ಜಿದಾರರು ಕೋರಿದ್ದರು.