Allahabad HC, Gyanvapi mosque
Allahabad HC, Gyanvapi mosque 
ಸುದ್ದಿಗಳು

ಜ್ಞಾನವಾಪಿ ಶಿವಲಿಂಗದ ವೈಜ್ಞಾನಿಕ ಪರೀಕ್ಷೆ: ಹಿಂದೂ ಪಕ್ಷಕಾರರ ಮನವಿಗೆ ಅಲಾಹಾಬಾದ್ ಹೈಕೋರ್ಟ್ ಸಮ್ಮತಿ

Bar & Bench

ವಾರಾಣಸಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಸಮೀಕ್ಷೆ ವೇಳೆ ಪತ್ತೆಯಾದ ವಸ್ತುವಿಗೆ ಯಾವುದೇ ಹಾನಿ ಉಂಟು ಮಾಡದಂತೆ ಅದು ಶಿವಲಿಂಗವೇ ಅಥವಾ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಲ್ಳಲು ವೈಜ್ಞಾನಿಕ ಪರೀಕ್ಷೆ ನಡೆಸಬಹುದು ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಲಕ್ಷ್ಮಿ ದೇವಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಿಶ್ರಾ-I ಅವರಿದ್ದ ಪೀಠ ಈ ನಿರ್ಧಾರಕ್ಕೆ ಬಂದಿದೆ.

“ (ಮಸೀದಿಯ) ಸ್ಥಳ/ ಶಿವಲಿಂಗಕ್ಕೆ ಹಾನಿಯಾಗದ ರೀತಿಯಲ್ಲಿ ವೈಜ್ಞಾನಿಕ ಪರೀಕ್ಷೆ ಮಾಡಬಹುದು ಎಂದು ಸಾರನಾಥ ವಾರಣಾಸಿ ವಲಯದ ಪುರಾತತ್ವ ಇಲಾಖೆ ಅಧೀಕ್ಷಕರು ಸಲ್ಲಿಸಿರುವ ವರದಿ ಹೇಳಿರುವುದು ಪರೀಕ್ಷೆಯನ್ನು ಕಾರ್ಯಸಾಧ್ಯ ಮತ್ತು ಅನುಕೂಲಕರವಾಗಿಸಿದೆ ಎಂದು ತಿಳಿಸಲು ನ್ಯಾಯಾಲಯಕ್ಕೆ ಯಾವುದೇ ಹಿಂಜರಿಕೆ ಇಲ್ಲ. ಆ ರೀತಿಯಲ್ಲಿ ಶಿವಲಿಂಗದ ನೈಜ ಸ್ಥಳ ಸಂರಕ್ಷಿತಗೊಂಡಿರುತ್ತದೆ ಎಂಬ ವಿಚಾರವನ್ನು ಪಾಲಿಸುವುದರ ಆಧಾರದಲ್ಲಿ ನೈಸರ್ಗಿಕ ಪ್ರಮೇಯ ಮುಂದುವರೆಯಲಿದೆ” ಎಂದು ಹೈಕೋರ್ಟ್‌ ಹೇಳಿದೆ.  

ಎಎಸ್‌ಐ ನೀಡಿರುವ ತಾಂತ್ರಿಕ ಮತ್ತು ವೈಜ್ಞಾನಿಕ ವರದಿ ವಿವಾದದಲ್ಲಿರುವ ಆಕೃತಿಗೆ ಯಾವುದೇ ಹಾನಿ ಉಂಟಾಗದಂತೆ  ಪರೀಕ್ಷೆ ನಡೆಸಲು ಮಾರ್ಗಗಳನ್ನು ತೆರೆದಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

ಎಎಸ್‌ಐ ಸಲ್ಲಿಸಿದ ವರದಿ ಮತ್ತು ಕಕ್ಷಿದಾರರ ವಾದಗಳನ್ನು ಪರಿಗಣಿಸಿದ ಪೀಠವು ವಾರಾಣಸಿ ಜಿಲ್ಲಾ ನ್ಯಾಯಾಲಯದ ಅಕ್ಟೋಬರ್ 2022 ರಲ್ಲಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು. ಈ ಆದೇಶ ವೈಜ್ಞಾನಿಕ ತನಿಖೆ ನಡೆಸಲು ಎಎಸ್‌ಐಗೆ ನಿರ್ದೇಶನಗಳನ್ನು ಕೋರಿ ಹಿಂದೂ ಪಕ್ಷಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು.

ಆದ್ದರಿಂದ, ಪ್ರಕರಣದಲ್ಲಿ ಮುಂದುವರಿಯಲು ಮತ್ತು ಎಎಸ್‌ಐ ಮಾರ್ಗದರ್ಶನದಲ್ಲಿ ಶಿವಲಿಂಗದ ವೈಜ್ಞಾನಿಕ ತನಿಖೆ ನಡೆಸುವಂತೆ , ವಾರಾಣಸಿಯ ಜಿಲ್ಲಾಧಿಕಾರಿಗಳಿಗೆ ಅದು ನಿರ್ದೇಶಿಸಿದೆ.

ವಾರಾಣಸಿ ಜಿಲ್ಲಾ ನ್ಯಾಯಾಲಯ ಅಕ್ಟೋಬರ್ 2022ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ  ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿತು.