Kashivishwanath Temple and Gyanvapi mosque
Kashivishwanath Temple and Gyanvapi mosque 
ಸುದ್ದಿಗಳು

ಗ್ಯಾನವಪಿ ಮಸೀದಿ: ಎಎಸ್‌ಐ ಸರ್ವೆ, ಸ್ಥಳೀಯ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದ ಅಲಾಹಾಬಾದ್‌ ಹೈಕೋರ್ಟ್‌

Bar & Bench

ವಾರಾಣಸಿಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಗ್ಯಾನವಪಿ-ಕಾಶಿ ಭೂ ವಿವಾದ ಪ್ರಕರಣದ ವಿಚಾರಣೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆಗೆ ಅನುಮತಿಸಿದ್ದಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ತಡೆ ನೀಡಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಈಗಾಗಲೇ ಪ್ರಕರಣವನ್ನು ಕೈಗೆತ್ತಿಕೊಂಡು ನಿರ್ವಹಿಸಿದ್ದು ತೀರ್ಪನ್ನು ಕಾಯ್ದಿರಿಸಿರುವಾಗ ಕೆಳ ನ್ಯಾಯಾಲಯದಲ್ಲಿನ ವಿಚಾರಣೆಯು ಕಾನೂನಿಗೆ ವಿರುದ್ಧವಾದ ತಪ್ಪು ನಡೆಯಾಗಿದೆ ಎಂದು ನ್ಯಾಯಮೂರ್ತಿ ಪ್ರಕಾಶ್‌ ಪಾಡಿಯಾ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಈ ಸಂಬಂಧ ಏಪ್ರಿಲ್‌ 8ರಂದು ವಾರಾಣಸಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಅಶುತೋಷ್‌ ತಿವಾರಿ ಅವರು ಎಎಸ್‌ಐ ಸರ್ವೆಗೆ ಆದೇಶಿಸಿದ್ದರು.

ಮೊಘಲ್‌ ದೊರೆ ಔರಂಗಜೇಬ್‌ ಸೂಚನೆಯಂತೆ 1669ರಲ್ಲಿ ಗ್ಯಾನವಪಿ ಮಸೀದಿ ನಿರ್ಮಿಸಲು 2000 ವರ್ಷಗಳ ಹಿಂದಿನ ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸಲಾಗಿತ್ತು. ಹೀಗಾಗಿ, ಹಿಂದೂಗಳಿಗೆ ಸೇರಬೇಕಾದ ಸ್ಥಳ ಅದಾಗಿದೆ. ಆದ್ದರಿಂದ ಅದನ್ನು ಹಿಂದಿನ ಸ್ಥಿತಿಗೆ ಮರಳಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಇದನ್ನು ಗ್ಯಾನವಪಿ ಮಸೀದಿ ನಿರ್ವಹಣಾ ಸಮಿತಿಯು ವಿರೋಧಿಸಿದೆ. ಅದಾಗ್ಯೂ, ವಾರಾಣಸಿ ನ್ಯಾಯಾಲಯವು ಎಎಸ್‌ಐ ಸರ್ವೆಕ್ಷಣೆಗೆ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ವಾರಾಣಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು. ವಾರಾಣಸಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ನಿರ್ವಹಣೆಯನ್ನು ಪ್ರಶ್ನಿಸಿರುವ ಮನವಿಯ ತೀರ್ಪನ್ನು ಅಲಾಹಾಬಾದ್‌ ಹೈಕೋರ್ಟ್‌ ಕಾಯ್ದಿರಿಸಿರುವಾಗ ವಾರಾಣಸಿ ನ್ಯಾಯಾಲಯವು ಎಎಸ್‌ಐ ತನಿಖೆಗೆ ಆದೇಶಿಸಿರುವುದಕ್ಕೆ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ, ವಕೀಲರಾದ ಅಹ್ಮದ್‌ ಫೈಜಾನ್‌ ಮತ್ತು ಪುನೀತ್‌ ಗುಪ್ತಾ ತಗಾದೆ ಎತ್ತಿದ್ದರು.