ದಾವೆದಾರರನ್ನು ಪ್ರತಿನಿಧಿಸುವ ವಕೀಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಕಿರುಕುಳದ ಅಸ್ತ್ರವಾಗಿ ಬಳಸುತ್ತಿರುವುದು ಹೆಚ್ಚುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರಿನ ನಾಗರಬಾವಿ ಗ್ರಾಮದ ಸರ್ವೇ ನಂಬರ್ 25/2ರಲ್ಲಿ 5.20 ಎಕರೆ ಜಮೀನಿನ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪಕ್ಷಗಾರರನ್ನು ಪ್ರತಿನಿಧಿಸುವ ವಕೀಲ ರಾಜೇಂದ್ರ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಸುಳ್ಳು ಪ್ರಕರಣ ದಾಖಲು ಪ್ರವೃತ್ತಿಯು ವಕೀಲರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಬಲ್ಲದು. ಅಗಾಧವಾದ ಅಪರಾಧವನ್ನು ಬಹಿರಂಗಪಡಿಸದ ಹೊರತು; ಹಕ್ಕು ಪತ್ರಗಳು, ಕಂದಾಯ ನಮೂದುಗಳು, ವಕೀಲರ ಅಧಿಕಾರ ಅಥವಾ ಮಾರಾಟ ಪತ್ರಗಳಿಗೆ ಸಂಬಂಧಿಸಿದ ವಿವಾದಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಪ್ರಾಸಿಕ್ಯೂಷನ್ ಸಂಯಮದಿಂದ ಮುಂದಡಿ ಇರಿಸಬೇಕು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಪ್ರತಿಯೊಬ್ಬ ವಕೀಲರೂ ಕೇವಲ ದಾವೆದಾರರ ಪರವಾಗಿ ಹಾಜರಾಗುತ್ತಾರೆ. ಅವರ ಮನೋಬಲ ಕುಂದಿಸಲು ಅತೃಪ್ತ ದಾವೆದಾರರು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ದಾಖಲಿಸಿ ತನಿಖಾ ಪ್ರಕ್ರಿಯೆಗೆ ಒಳಪಡಿಸಿದರೆ ಅದು ವೃತ್ತಿಪರ ಜವಾಬ್ದಾರಿಗಳ ನಿರ್ಭೀತ ನಿರ್ವಹಣೆಯ ಮೇಲೆ ಗಾಢವಾದ ಪಾರ್ಶ್ವವಾಯು ಪರಿಣಾಮ ಬೀರುತ್ತದೆ” ಎಂದು ಪೀಠ ಹೇಳಿದೆ.
“ಅಗಾಧವಾದ ಅಪರಾಧವನ್ನು ಬಹಿರಂಗಪಡಿಸದ ಹೊರತು; ಹಕ್ಕು ಪತ್ರಗಳು, ಕಂದಾಯ ನಮೂದುಗಳು, ವಕೀಲರ ಅಧಿಕಾರ ಅಥವಾ ಮಾರಾಟ ಪತ್ರಗಳಿಗೆ ಸಂಬಂಧಿಸಿದ ವಿವಾದಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಪ್ರಾಸಿಕ್ಯೂಷನ್ ಸಂಯಮದಿಂದ ಮುಂದಡಿ ಇರಿಸಬೇಕು’ ಎಂದು ಪ್ರಾಸಿಕ್ಯೂಷನ್ಗೆ ನಿರ್ದೇಶಿಸಿದೆ. ಪ್ರಾಸಿಕ್ಯೂಷನ್ ಪರ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ವಾದಿಸಿದ್ದರು.
ಐಪಿಸಿ ಸೆಕ್ಷನ್ಗಳಾದ 102, 420, 468 ವಂಚನೆ ಮಾಡುವ ಉದ್ದೇಶದಿಂದ ನಕಲಿ ಮಾಡುವುದು, 506 ಕ್ರಿಮಿನಲ್ ಬೆದರಿಕೆ (ಬಿ) ಅಡಿಯಲ್ಲಿ ಅರ್ಜಿದಾರರ ವಿರುದ್ಧ ಚಂದ್ರಾ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತ ಎಫ್ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ 8ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ವಕೀಲ ಎಸ್ ರಾಜೇಂದ್ರ ಮತ್ತಿತರರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.