Rana George and Karnataka HC 
ಸುದ್ದಿಗಳು

ಸಚಿವ ಜಾರ್ಜ್‌ ಪುತ್ರ ರಾಣಾ ಜಮೀನಿಗೆ ಓಡಾಡಲು ಕಾಡಿನ ದಾರಿ ಬಳಕೆಗೆ ಅನುಮತಿಸಿದ ಹೈಕೋರ್ಟ್‌

ಅಭಯಾರಣ್ಯದ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವವರಿಗೆ ಓಡಾಡಲು ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 27(1)(ಸಿ) ಅಡಿ ವಿನಾಯಿತಿ ಇದೆ ಎಂದು ರಾಣಾ ಜಾರ್ಜ್‌ ವಾದಿಸಿದ್ದರು.

Bar & Bench

ಮೈಸೂರು ಜಿಲ್ಲೆಯ ಎಚ್‌ ಡಿ ಕೋಟೆ ತಾಲ್ಲೂಕಿನ ಸರಗೂರು ಹೋಬಳಿಯ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿಗೆ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ರಾತ್ರಿ-ಹಗಲು ಓಡಾಡಲು ಇಂಧನ ಸಚಿವ ಕೆ ಜೆ ಜಾರ್ಜ್‌ ಪುತ್ರ ರಾಣಾ ಜಾರ್ಜ್‌ ಅವರಿಗೆ ಅನುಮತಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ. ತಮ್ಮ ಜಮೀನಿಗೆ ತೆರಳುವಾಗ ವನ್ಯಜೀವಿ ತಾಣದಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಯಾವುದೇ ಹಾನಿ ಮಾಡದಂತೆ ಇದೇ ವೇಳೆ ರಾಣಾ ಅವರಿಗೆ ನಿರ್ಬಂಧಿಸಿದೆ.

ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆಯನ್ನು ಬಳಸದಂತೆ ನಿರ್ಬಂಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2024ರ ಮಾಚ್೯ 1ರಂದು ಹೊರಡಿಸಿರುವ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಗೊಳಿಸಿದ್ದು, ರಾಣಾ ಜಾಜ್೯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದೆ.

“2024ರ ಮಾಚ್೯ 1ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶವು ರಾಣಾ ಜಾರ್ಜ್‌ ವಿರುದ್ಧ ಇರುವುದರಿಂದ ಅದನ್ನು ವಜಾ ಮಾಡಲಾಗಿದೆ. ರಾಣಾ ಅವರು ಯಾವುದೇ ಅಡ್ಡಿ ಇಲ್ಲದೇ ಅವರ ಆಸ್ತಿಗೆ ತೆರಳಲು ಕಾನೂನಿನ ಅನ್ವಯ ಅನುಕೂಲ ಮಾಡಿಕೊಡಬೇಕು. ಅಲ್ಲಿ ಓಡಾಡುವಾಗ ರಾಣಾ ಅವರು ಭೌತಿಕವಾಗಿ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿ ಉಂಟು ಮಾಡಬಾರದು” ಎಂದು ನ್ಯಾಯಾಲಯ ನಿರ್ದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆಯಲ್ಲಿನ ಸರ್ವೇ ನಂಬರ್‌ 1, 2, 3, 26, 32 ಮತ್ತು 33ರ ಭೂಮಿಯ ಮಾಲೀಕತ್ವವನ್ನು ರಾಣಾ ಜಾರ್ಜ್‌ ಹೊಂದಿದ್ದಾರೆ. ಇದು ನುಗು ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಈ ಆಸ್ತಿಯನ್ನು ರಾಣಾ ಅವರು ವೈಯಕ್ತಿಕ ಬಳಕೆ ಮಾಡುತ್ತಿದ್ದು, ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಇಡೀ ಪ್ರದೇಶ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದೆ ಎಂಬ ಅರಿವಿದೆ ಎಂದು ರಾಣಾ ವಿವರಿಸಿದ್ದರು.

ಖಾಸಗಿ ಭೂಮಿ ಮಾಲೀಕರಿಗೆ ತಮ್ಮ ಜಮೀನಿಗೆ ತೆರಳಲು ಜಾಗವಿಲ್ಲದಿದ್ದಾಗ ಸಾರ್ವಜನಿಕ ಜಾಗವನ್ನು ಬಳಕೆ ಮಾಡಲು ಅನುಮತಿಸಬೇಕು ಎಂಬುದು ಸ್ಥಾಪಿತ ಕಾನೂನು. ಹಾಲಿ ಪ್ರಕರಣದಲ್ಲಿ ರಾಣಾ ಜಾರ್ಜ್‌ ಅವರ ಜಮೀನು ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಜಮೀನಿಗೆ ತೆರಳಲು ಮಣ್ಣಿನ ರಸ್ತೆಯನ್ನೇ ಆಶ್ರಯಿಸಬೇಕಿದ್ದು, ಅದು ಅರಣ್ಯ ಇಲಾಖೆಯ ವಶದಲ್ಲಿದೆ. ರಾಣಾ ಅವರ ಜಮೀನಿಗೆ ತೆರಳಲು ಇನ್ನೊಂದು ರಸ್ತೆ ಇದ್ದು, ಮಾನ್ಸೂನ್‌ ಅಥವಾ ನುಗು ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಗಿಂತ ಹೆಚ್ಚಾದಾಗ ಅಲ್ಲಿ ಓಡಾಡಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ರಾಣಾ ಅವರಿಗೆ ಅರಣ್ಯ ಇಲಾಖೆಯ ದಾರಿ ಬಳಸದೇ ವಿಧಿಯಿಲ್ಲದಂತಾಗಿದೆ ಎಂದು ವಾದಿಸಲಾಗಿತ್ತು.

ಅಭಯಾರಣ್ಯದ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವವರಿಗೆ ಓಡಾಡಲು ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 27(1)(ಸಿ) ಅಡಿ ವಿನಾಯಿತಿ ಇದೆ. ಈಗ ಅರಣ್ಯ ಇಲಾಖೆಯು ರಾಣಾ ಅವರನ್ನು ತಮ್ಮ ಜಮೀನಿಗೆ ಸಂಜೆ 6ರಿಂದ ಬೆಳಿಗಿನ ಜಾವ 6 ಗಂಟೆಯವರೆಗೆ ಅರಣ್ಯ ಇಲಾಖೆಯ ರಸ್ತೆಯಲ್ಲಿ ಓಡಾಡಲು ಕಾನೂನುಬಾಹಿರವಾಗಿ ನಿರ್ಬಂಧಿಸುವ ಮೂಲಕ ಕಿರುಕುಳ ನೀಡುತ್ತಿದೆ. ಅರಣ್ಯ ಇಲಾಖೆಯ ರಸ್ತೆಯನ್ನು ಬಳಕೆ ಮಾಡುವುದಕ್ಕೆ ಸಾರ್ವಜನಿಕರು ಆಕ್ಷೇಪಿಸಿರುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಆಧರಿಸಿ ಹೆಡಿಯಾಲ ವಲಯದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿಯು ಓಡಾಟಕ್ಕೆ ನಿರ್ಬಂಧಿಸಿದ್ದಾರೆ ಎಂದು ವಿವರಿಸಲಾಗಿದೆ. ಹೀಗಾಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ರದ್ದುಪಡಿಸಿ, ದಿನದ 24 ತಾಸು ತಮ್ಮ ಜಮೀನಿಗೆ ಓಡಾಲು ಅನುಮತಿಸಬೇಕು ಎಂದು ರಾಣಾ ಜಾರ್ಜ್‌ ಕೋರಿದ್ದರು.