Chief Justice N V Anjaria and K V Aravind, Karnataka HC 
ಸುದ್ದಿಗಳು

ಅಮ್ಮನಿಗೆ ₹7 ಲಕ್ಷ ಜೀವನಾಂಶ ಪ್ರಶ್ನಿಸಿದ್ದ ಪುತ್ರ, ಮೊಮ್ಮಗಳ ಮೇಲ್ಮನವಿ ವಜಾ ಮಾಡಿದ ಹೈಕೋರ್ಟ್‌

ಗಣಪತಿ ಹಾಗೂ ಸಂಜನಾ ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಸಂಗತಿ ಶಾಂತಿ ಬೋಪಣ್ಣ ಅವರ ಅರಿವಿಗೆ ಬಂದಿತ್ತು. ಹೀಗಾಗಿ, ದಾನಪತ್ರ ರದ್ದುಪಡಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಕೋರಿದ್ದರು. ಇದನ್ನು ಜಿಲ್ಲಾಧಿಕಾರಿ ಪುರಸ್ಕರಿಸಿದ್ದರು.

Bar & Bench

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ 85 ವರ್ಷದ ಅಪ್ಪರಂಡ ಶಾಂತಿ ಬೋಪಣ್ಣ ಅವರ ಜೀವನ ನಿರ್ವಹಣೆಗೆ ವಾರ್ಷಿಕ ತಲಾ ₹7 ಲಕ್ಷ ಪಾವತಿಸಿ ಎಂದು ಶಾಂತಿ ಬೋಪಣ್ಣ ಅವರ ಪುತ್ರ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಈಚೆಗೆ ಎತ್ತಿಹಿಡಿದಿದೆ.

ಏಕಸದಸ್ಯ ಪೀಠದ ಆದೇಶ ರದ್ದತಿ ಕೋರಿ ಶಾಂತಿ ಬೋಪಣ್ಣ ಅವರ ಪುತ್ರ ಎ ಬಿ ಗಣಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠವು ತಿರಸ್ಕರಿಸಿದೆ.

ಅಪ್ಪರಂಡ ಶಾಂತಿ ಬೋಪಣ್ಣ ಅವರ ಜೀವನಾಂಶಕ್ಕೆ ಸಂಬಂಧಿಸಿದಂತೆ ಅವರ ಮಗ ಮತ್ತು ಮೊಮ್ಮಗಳು ವರ್ಷವೊಂದಕ್ಕೆ ತಲಾ ₹7 ಲಕ್ಷ ಪಾವತಿಸಬೇಕು ಎಂಬ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯ ಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಮೇಲ್ಮನವಿದಾರ ಗಣಪತಿ ಪರ ಹೈಕೋರ್ಟ್‌ ವಕೀಲರಾದ ಎಚ್‌ ಎನ್‌ ಮಂಜುನಾಥ್‌ ಹಾಗೂ ಅಪ್ಪರಂಡ ಶಾಂತಿ ಬೋಪಣ್ಣ ಪರ ವಕೀಲೆ ರೂಪಾ ರೋಣ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಹೆರೂರು ಎಸ್ಟೇಟ್‌ ನಿವಾಸಿಯಾದ ಅಪ್ಪರಂಡ ಶಾಂತಿ ಬೋಪಣ್ಣ ತಾವು ಹೊಂದಿದ್ದ 22 ಎಕರೆ ಕಾಫಿ ಎಸ್ಟೇಟ್‌ ಅನ್ನು ತಮ್ಮ ಪುತ್ರ ಎ ಬಿ ಗಣಪತಿ ಹಾಗೂ ಮೊಮ್ಮಗಳಾದ ಪೂಜಾ ಅಲಿಯಾಸ್ ಸಂಜನಾ ಸುಬ್ಬಯ್ಯ ಅವರಿಗೆ 2016ರಲ್ಲಿ ದಾನ ಮಾಡಿದ್ದರು. 

ಈ ವೇಳೆ ಅಪ್ಪರಂಡ ಶಾಂತಿ ಬೋಪಣ್ಣ ಅವರ ಜೀವನ ನಿರ್ವಹಣೆಗೆ ವಾರ್ಷಿಕ ತಲಾ ₹7 ಲಕ್ಷ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸುವುದಾಗಿ ಗಣಪತಿ ಹಾಗೂ ಸಂಜನಾ ಭರವಸೆ ನೀಡಿದ್ದರು. ಅಂತೆಯೇ, 2016ರಿಂದ 2019ರವರೆಗೆ ಹಣ ಪಾವತಿಸಿದ್ದರು. ತದನಂತರ ಹಣ ನೀಡಿರಲಿಲ್ಲ.

ಗಣಪತಿ ಹಾಗೂ ಸಂಜನಾ ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಸಂಗತಿ ಶಾಂತಿ ಬೋಪಣ್ಣ ಅವರ ಅರಿವಿಗೆ ಬಂದಿತ್ತು. ಹೀಗಾಗಿ, ದಾನಪತ್ರ ರದ್ದುಪಡಿಸಬೇಕು ಎಂದು ಕೋರಿ ಅವರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಮಂಡಳಿಯ ಪ್ರತಿನಿಧಿಯೂ ಆದ ಕೊಡಗು ಜಿಲ್ಲೆ ಮಡಿಕೇರಿಯ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಉ‍ಪವಿಭಾಗಾಧಿಕಾರಿ 2021ರ ಸೆಪ್ಟೆಂಬರ್ 15ರಂದು ದಾನಪತ್ರ ರದ್ದುಗೊಳಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಗಣಪತಿ ಹಾಗೂ ಸಂಜನಾ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. 2023ರ ಮಾರ್ಚ್‌ 23ರಂದು ಉಪವಿಭಾಗಾಧಿಕಾರಿ ಆದೇಶವನ್ನು ರದ್ದುಪಡಿಸಿದ್ದ ಜಿಲ್ಲಾಧಿಕಾರಿ, ಪುತ್ರ ಹಾಗೂ ಮೊಮ್ಮಗಳ ಆಸ್ತಿ ಹಕ್ಕನ್ನು ಮರು ಸ್ಥಾಪಿಸಲು ಆದೇಶಿಸಿದ್ದರು. ಜೀವನದ ಸಂಧ್ಯಾ ಕಾಲದಲ್ಲಿರುವ ವೃದ್ಧ ತಾಯಿಯ ಜೀವಿತಾವಧಿವರೆಗೆ ವಾರ್ಷಿಕ ಜೀವನಾಂಶ ಪಾವತಿಸಿ ಎಂದು ಮಗ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿದ್ದರು. 

ಈ ಆದೇಶ ಪ್ರಶ್ನಿಸಿ ಶಾಂತಿ ಬೋಪಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು 2023ರ ಡಿಸೆಂಬರ್ 20ರಂದು ತಲಾ ₹7 ಲಕ್ಷ ಪಾವತಿಸಿ ಎಂದು ಪುತ್ರ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿತ್ತು.

AB Ganapathy Vs Apparanda Shanthi Bopanna.pdf
Preview