Shobha Karandlaje, Karnataka High CourtImage source - Facebook  
ಸುದ್ದಿಗಳು

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಯ್ಕೆ ಅಸಿಂಧು ಕೋರಿದ್ದ ಚುನಾವಣಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

“ಪ್ರಜಾಪ್ರತಿನಿಧಿ ಕಾಯಿದೆ-1951ರ ಸೆಕ್ಷನ್‌ 81ರ ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯು, ಯಾವ ಕಾರಣಗಳಡಿ ಪ್ರಕರಣ ವಿಚಾರಣೆಗೆ ಒಳಪಡಬೇಕು ಎಂಬುದನ್ನು ನಿಖರವಾಗಿ ವಿವರಿಸುವಲ್ಲಿ ವಿಫಲವಾಗಿದೆ” ಎಂದ ನ್ಯಾಯಾಲಯ.

Bar & Bench

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 2024ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಚುನಾವಣಾ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ತಿರಸ್ಕರಿಸಿದೆ.

ಬೆಂಗಳೂರು ಉದ್ಯಮಿ ಬಿ ಮೋಹನ ಕುಮಾರ್ ಸಲ್ಲಿಸಿದ್ದ ಚುನಾವಣಾ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಇ ಎಸ್‌ ಇಂದಿರೇಶ್‌ ಅವರ ಏಸಕದಸ್ಯ ಪೀಠ ಪ್ರಕಟಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಮೋಹನ ಕುಮಾರ್‌ ಪರ ಹೈಕೋರ್ಟ್‌ ವಕೀಲ ಸ್ಮರಣ ಶೆಟ್ಟಿ ಅವರು “ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಾಗ ವಾಸ್ತವಾಂಶ ಮುಚ್ಚಿಟ್ಟಿದ್ದಾರೆ” ಎಂದು ಆಕ್ಷೇಪಿಸಿದ್ದರು.

ಅರ್ಜಿದಾರರ ಈ ವಾದವನ್ನು ತಿರಸ್ಕರಿಸಿರುವ ಪೀಠವು “ಪ್ರಜಾಪ್ರತಿನಿಧಿ ಕಾಯಿದೆ-1951ರ ಸೆಕ್ಷನ್‌ 81ರ ಅಡಿಯಲ್ಲಿ ಸಲ್ಲಿಸಲಾಗಿರುವ ಈ ಅರ್ಜಿಯು, ಯಾವ ಕಾರಣಗಳಡಿ ವಿಚಾರಣೆಗೆ ಒಳಪಡಬೇಕು ಎಂಬುದನ್ನು ನಿಖರವಾಗಿ ವಿವರಿಸುವಲ್ಲಿ ವಿಫಲವಾಗಿದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ. ಶೋಭಾ ಕರಂದ್ಲಾಜೆ ಪರ ಹೈಕೋರ್ಟ್ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿದ್ದರು.