ಸುದ್ದಿಗಳು

ಅನುಕಂಪಾಧಾರಿತ ಉದ್ಯೋಗ: ಪ್ರಕ್ರಿಯಾಲೋಪ ತಪ್ಪಿಸಲು ಎಸ್‌ಒಪಿ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅನುಕಂಪದ ಉದ್ಯೋಗ ಪಡೆಯುವ ಪ್ರಕ್ರಿಯೆಯಲ್ಲಾಗುವ ಲೋಪ ತಪ್ಪಿಸಲು ಏಕೀಕೃತ ಎಸ್‌ಒಪಿ ರೂಪಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದ್ದು, ಅನುಕಂಪದ ನೇಮಕಾತಿ ನಡೆಸುವ ಅಧಿಕಾರಿಗಳಿಗೆ ತರಬೇತಿ ನೀಡುವಂತೆ ನಿರ್ದೇಶಿಸಿದೆ.

Siddesh M S

ತಹಶೀಲ್ದಾರ್‌ ಕಚೇರಿಯಲ್ಲಿ ಗುಮಾಸ್ತರಾಗಿದ್ದ ತಂದೆ ನಿಧನರಾದ ಹಿನ್ನೆಲೆಯಲ್ಲಿ ಒಂದು ದಶಕ ಹೋರಾಟ ನಡೆಸಿ ಕಲಬುರ್ಗಿಯ ಜೇವರ್ಗಿ ತಾಲ್ಲೂಕಿನ ಕುಟುಂಬವು ಕೊನೆಗೂ ಕರ್ನಾಟಕ ಹೈಕೋರ್ಟ್‌ ಆದೇಶದಿಂದ ಅನುಕಂಪದ ಉದ್ಯೋಗ ಪಡೆಯುವಲ್ಲಿ ಈಚೆಗೆ ಯಶಸ್ವಿಯಾಗಿದೆ.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ಗುಮಾಸ್ತನಾಗಿದ್ದ ಪತಿ ರಾಜಾ ಪಟೇಲ್‌ ಬಂದಾ ನಿಧನರಾದ ಹಿನ್ನೆಲೆಯಲ್ಲಿ ಅನುಕಂಪದ ಉದ್ಯೋಗವನ್ನು ನಾಲ್ವರು ಮಕ್ಕಳಲ್ಲಿ ಒಬ್ಬರಿಗೆ ನೀಡುವಂತೆ ಕೋರಿ ಪತ್ನಿಯು ನಿಗದಿತ ಅವಧಿಯಲ್ಲಿ ಸಲ್ಲಿಸಿದ್ದ ಮನವಿಯ ಅನುಸಾರ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌ ಮತ್ತು ಕೆ ಎಸ್‌ ಹೇಮಲೇಖಾ ಅವರ ವಿಭಾಗೀಯ ಪೀಠ ಆದೇಶಿಸಿದೆ.

“ಸರ್ಕಾರಿ ಸೇವಕ ನಿಧನರಾದ ಒಂದು ವರ್ಷದಲ್ಲಿ ಕಾನೂನಾತ್ಮಕ ವಾರಸುದಾರರು ವ್ಯವಸ್ಥಿತವಾಗಿ ಅರ್ಜಿ ಸಲ್ಲಿಸದಿದ್ದರೆ ಅನುಕಂಪದ ಉದ್ಯೋಗಕ್ಕೆ ಅರ್ಹರಾಗುವುದಿಲ್ಲ” ಎಂಬ ರಾಜ್ಯ ಸರ್ಕಾರದ ವಾದವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ತಿರಸ್ಕರಿಸಿದೆ. ಇದೇ ವೇಳೆ, ಅನುಕಂಪಾಧಾರಿತ ಉದ್ಯೋಗಗಳ ವಿಚಾರದಲ್ಲಿ ಉಂಟಾಗುವ ಪ್ರಕ್ರಿಯಾಲೋಪ ತಡೆಯಲು ಏಕೀಕೃತ ಪ್ರಮಾಣಿತ ಕಾರ್ಯಾಚಾರಣ ವಿಧಾನ (ಎಸ್‌ಒಪಿ) ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

“ಅನುಕಂಪದ ಉದ್ಯೋಗ ಕೋರುವ ಪ್ರತಿಯೊಂದು ಅರ್ಜಿಯು ನಿಗದಿತ ನಮೂನೆಯಲ್ಲಿರಲಿ ಅಥವಾ ಇಲ್ಲದಿರಲಿ ಸಂಬಂಧಿತ ಪ್ರಾಧಿಕಾರವು ಒಂದು ತಿಂಗಳಲ್ಲಿ ಲಿಖಿತವಾಗಿ ಸ್ವೀಕೃತಿ ನೀಡಿ ಅರ್ಜಿಯ ಸ್ಥಿತಿಗತಿ (ಪರಿಪೂರ್ಣ ಅಥವಾ ಅಪೂರ್ಣವಾಗಿದೆಯೇ); ನಮೂನೆಯಲ್ಲಿ ಏನಾದರೂ ಸಮಸ್ಯೆ ಇದೆಯೇ; ಇತರೆ ಅವಲಂಬಿತರಿಗೆ ಅರ್ಜಿ ಸಲ್ಲಿಸುವ ಹಕ್ಕು, ಅನ್ವಯಿಸುವ ಕಾಲಮಿತಿಯ ಬಗ್ಗೆ ತಿಳಿಸಬೇಕು. ಅರ್ಜಿದಾರೆಯು ವಿಧವೆಯಾಗಿದ್ದು, ಅನಕ್ಷರಸ್ಥೆ ಅಥವಾ ಏನೇ ಆಗಿದ್ದರೂ ಅನುಕಂಪದ ಉದ್ಯೋಗ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಂಬಂಧಿತ ಇಲಾಖೆಯು ಅವರಿಗೆ ಯಾವ ವಿಧಾನದಲ್ಲಿ ದಾಖಲೆ ಸಲ್ಲಿಸಬೇಕು ಮತ್ತು ಇತರೆ ಅವಲಂಬಿತರು ಅರ್ಜಿ ಸಲ್ಲಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಅವರಿಗೆ ನೆರವಾಗಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಅಲ್ಲದೇ, “ಅನುಕಂಪದ ಉದ್ಯೋಗ ಸಂಬಂಧಿತ ಅರ್ಜಿ ಸ್ವೀಕೃತಿಯಾದ ಗರಿಷ್ಠ ಮೂರು ತಿಂಗಳಲ್ಲಿ ಅದನ್ನು ನಿರ್ಧರಿಸಬೇಕು. ಅರ್ಜಿಯು ಅನೂರ್ಜಿತವಾದ ಸಕಾರಣಗಳನ್ನು ಒಳಗೊಂಡು ಅದನ್ನು ಅರ್ಜಿದಾರರಿಗೆ ತಕ್ಷಣ ತಿಳಿಸಬೇಕು. ಪ್ರಕ್ರಿಯೆಯಲ್ಲಾಗುವ ಲೋಪಗಳನ್ನು ತಪ್ಪಿಸಲು ರಾಜ್ಯ ಸರ್ಕಾರವು ಏಕೀಕೃತ ಪ್ರಮಾಣಿತ ಕಾರ್ಯಾಚರಣ ವಿಧಾನ ರೂಪಿಸಲು ಮತ್ತು ಅನುಕಂಪದ ಉದ್ಯೋಗಕ್ಕೆ ನೇಮಕಾತಿ ಮಾಡುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ನಷ್ಟ ಅನುಭವಿಸುವ ಕುಟುಂಬಗಳಿಗೆ ತಕ್ಷಣ ಆರ್ಥಿಕ ಪರಿಹಾರ ಕಲ್ಪಿಸುವ ಅನುಕಂಪ ನೇಮಕ ಪ್ರಕರಣಗಳು ಕಲ್ಯಾಣ ಕ್ರಮಗಳಾಗಿದ್ದು, ಕಾರ್ಯವಿಧಾನದಲ್ಲಿ ನ್ಯಾಯಸಮ್ಮತತೆ ಕಾಯ್ದುಕೊಳ್ಳುವ ಮಹತ್ವದ ಕರ್ತವ್ಯವನ್ನು ಸರ್ಕಾರ ನಿಭಾಯಿಸಬೇಕು. ಅನಕ್ಷರಸ್ಥರು ಅಥವಾ ವಿಧವೆಯು ಸೂಕ್ತ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದಾಗ ಸಂಬಂಧಿತ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ, ಪಾರದರ್ಶಕತೆಯಿಂದ ಸಹಕಾರಿಯಾಗಿ ನಡೆದುಕೊಳ್ಳಬೇಕು. ಇದನ್ನು ಮಾಡದಿದ್ದರೆ ನಿಧನರಾದ ಸರ್ಕಾರಿ ಅಧಿಕಾರಿಯನ್ನು ಅವಲಂಬಿಸಿರುವವರ ಹಕ್ಕುದಾರರ ಅವಕಾಶ ನಿರಾಕರಿಸಿದಂತಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್‌ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ರಾಜಾ ಪಟೇಲ್‌ ಬಂದಾ ಅವರು 16.12.2014ರಂದು ನಿಧನರಾಗಿದ್ದು, 02.01.2015ರಂದು ಆತನ ಪತ್ನಿಯು ಪಿಂಚಣಿ, ನಿವೃತ್ತಿ ಸೌಲಭ್ಯಗಳು ಹಾಗೂ ನಾಲ್ವರು ಪುತ್ರರಲ್ಲಿ ಒಬ್ಬನಿಗೆ ಅನುಕಂಪದ ಉದ್ಯೋಗ ಕೋರಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರವು ಸ್ಪಂದಿಸಲು ವಿಫಲವಾಗಿತ್ತು. ಹೀಗಾಗಿ, ಪ್ರತಿವಾದಿಯ ಅಣ್ಣ 05.10.2015ರಂದು ಅನುಕಂಪದ ಉದ್ಯೋಗ ಕೋರಿದ್ದು, ವಯೋಮಿತಿ ಮೀರಿದ್ದರಿಂದ ಉದ್ಯೋಗ ನಿರಾಕರಿಸಲಾಗಿತ್ತು. ಆದ್ದರಿಂದ 23.02.2017ರಂದು ಮಹಬೂಬ್‌ ಪಟೇಲ್‌ ಅವರು 02.01.2015ರಂದು ತನ್ನ ತಾಯಿ ಸಲ್ಲಿಸಿದ್ದ ಮನವಿ ಪರಿಗಣಿಸಿ, ಅನುಕಂಪದ ಉದ್ಯೋಗ ನೀಡುವಂತೆ ಮನವಿ ಮಾಡಿದ್ದರು.

ಇದಕ್ಕೆ ತಹಶೀಲ್ದಾರ್‌ ಸ್ವೀಕೃತಿ ನೀಡಿದ್ದರು. ಆದರೆ, ಕರ್ನಾಟಕ ಸಿವಿಲ್‌ ಸೇವೆಗಳ (ಅನುಕಂಪದ ನೆಲೆಯಲ್ಲಿ ನೇಮಕಾತಿ) ನಿಯಮಗಳು 1996ರ ನಿಯಮ 5ರ ಅಡಿ ಅವಕಾಶವಿಲ್ಲ ಎಂದು ಮಹಬೂಬ್‌ ಪಟೇಲ್‌ ಅರ್ಜಿ ವಜಾಗೊಳಿಸಲಾಗಿತ್ತು. ನಿಯಮ 5ರ ಪ್ರಕಾರ ಸರ್ಕಾರಿ ಸೇವಕ ನಿಧನರಾದ ಒಂದು ವರ್ಷದೊಳಗೆ ಅನುಕಂಪದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹೇಳಲಾಗಿತ್ತು. ಈ ಸೀಕೃತಿಗೆ ಆಕ್ಷೇಪಿಸಿ ಮಹಬೂಬ್‌ ಪಟೇಲ್‌ ಅವರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಯ ಕಲಬುರ್ಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೆಎಸ್‌ಎಟಿಯು ಪುರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿದ್ದ ಸರ್ಕಾರದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಎರಡು ತಿಂಗಳಲ್ಲಿ ಮಹಬೂಬ್‌ ಪಟೇಲ್‌ಗೆ ಉದ್ಯೋಗ ನೀಡಲು ನಿರ್ದೇಶಿಸಿದೆ.

ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಮಲ್ಹಾರ್‌ ರಾವ್‌, ವಕೀಲೆ ಟಿ ಅರ್‌ ಮಾಯಾ ಹಾಗೂ ಮಹಬೂಬ್‌ ಪಟೇಲ್‌ ಪರವಾಗಿ ವಕೀಲ ದೇವರಾಜ್‌ ಮನೋಹರ್‌ ವಾದಿಸಿದ್ದರು.

State of Karnataka Vs Mahaboob Patel.pdf
Preview