Karnataka High Court
Karnataka High Court 
ಸುದ್ದಿಗಳು

ಭಜರಂಗ ದಳ ಮುಖಂಡ ಭರತ್‌ ಕುಮಾರ್‌ ಗಡಿಪಾರು ಆದೇಶ ರದ್ದುಪಡಿಸಿದ ಹೈಕೋರ್ಟ್‌

Bar & Bench

ದಕ್ಷಿಣ ಕನ್ನಡ ಜಿಲ್ಲೆಯ ಭಜರಂಗ ದಳ ಮುಖಂಡ ಭರತ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಭರತ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು ಭರತ್ ಕುಮಾರ್ ತಮ್ಮ ವಿರುದ್ಧ ಇದ್ದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಈಗಾಗಲೇ ಆರು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಒಂದು ಪ್ರಕರಣದಲ್ಲಿ ನ್ಯಾಯಾಲಯದ ತಡೆ ಆದೇಶ ಇದ್ದು ಇನ್ನೊಂದು ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಮಂಗಳೂರು ಉಪ ವಿಭಾಗಾಧಿಕಾರಿ ಹೊರಡಿಸಿರುವ ಗಡಿಪಾರು ಆದೇಶ ಊಹೆಗಳಿಂದ ಕೂಡಿದೆ. ಭರತ್ ಕುಮಾರ್ ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗಬಹುದು ಎಂಬ ಶಂಕೆ ಕಾನೂನು ಬಾಹಿರ. ಆದ್ದರಿಂದ, ಗಡಿಪಾರು ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ಇದನ್ನು ಪುರಸ್ಕರಿಸಿದ ಪೀಠವು ಮಂಗಳೂರು ಉಪ ವಿಭಾಗಾಧಿಕಾರಿ ಎಸ್ ಜೆ ಹರ್ಷವರ್ಧನ್ ಅವರು ಕರ್ನಾಟಕ ಪೊಲೀಸ್ ಕಾಯಿದೆ-1963ರ ಸೆಕ್ಷನ್ 55 ಮತ್ತು 56ರ ಅಡಿಯಲ್ಲಿ ತಮ್ಮ ಅರೆನ್ಯಾಯಿಕ ಪ್ರಕ್ರಿಯೆಯಲ್ಲಿನ ಅಧಿಕಾರ ಚಲಾಯಿಸಿ ಇದೇ 2ರಂದು ಹೊರಡಿಸಿದ್ದ ಗಡಿಪಾರು ಆದೇಶವನ್ನು ರದ್ದುಗೊಳಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದ್ದರು.

ಪ್ರಕರಣದ ಹಿನ್ನೆಲೆ: ಉಪ ವಿಭಾಗಾಧಿಕಾರಿಯು ತಮ್ಮ ಆದೇಶದಲ್ಲಿ, ಭರತ್ ಕುಮಾರ್ ಬಂಟ್ವಾಳ ತಾಲ್ಲೂಕು ಪುದು ಗ್ರಾಮದ ಕುಮ್ಡೇಲು ಮನೆ ನಿವಾಸಿಯಾಗಿದ್ದು ಈತ ರೌಡಿ ಸ್ವಭಾವ ಹೊಂದಿರುತ್ತಾನೆ. ತನ್ನ ಸಹಚರರೊಂದಿಗೆ ಪರಂಗಿಪೇಟೆ, ಕಡೆಗೋಳಿ, ಬಿ ಸಿ ರೋಡ್ ಹಾಗೂ ಬಂಟ್ವಾಳ ಪ್ರದೇಶಗಳಲ್ಲಿ ಕೊಲೆ, ಕೊಲೆ ಯತ್ನ, ದೊಂಬಿ, ಹಲ್ಲೆಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 2024ರ ಮಾರ್ಚ್ ಮತ್ತು ಮೇ ಮಧ್ಯದಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯ ಇರುತ್ತದೆ. ಈ ದೃಷ್ಟಿಯಿಂದ ಈತನನ್ನು 2024ರ ಮಾರ್ಚ್ 28ರಿಂದ 2024ರಿಂದ ಜಾರಿಗೆ ಬರುವಂತೆ ಜೂನ್ 30ರವರೆಗೆ ಗಡಿಪಾರು ಮಾಡಲಾಗಿದೆ ಎಂದು ಹೇಳಿದ್ದರು.