ಸುದ್ದಿಗಳು

'ಜಾಡಮಾಲಿʼ ಪದಕ್ಕೆ ಬದಲಾಗಿ 'ಸ್ವಚ್ಛತಾ ಸಹಾಯಕʼ ಎಂದು ಸಂಬೋಧಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

“ಸಮಾಜದಲ್ಲಿ ಅಮೂಲ್ಯ ಸೇವೆ ಸಲ್ಲಿಸುವ ಒಂದು ವರ್ಗದ ನೌಕರರನ್ನು ಉದ್ದೇಶಿಸುವ ಪದ ಗೌರವದಿಂದ ಕೂಡಿರಬೇಕು. ಹೀಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬಳಕೆಯ ಬದಲಾಗಿ 'ಸ್ವಚ್ಛತಾ ಸಹಾಯಕ' ಎಂಬುದಾಗಿಯೇ ಬಳಸಬೇಕು” ಎಂದು ಆದೇಶಿಸಿದ ಹೈಕೋರ್ಟ್‌.

Bar & Bench

ರಾಜ್ಯ ಸರ್ಕಾರವು ಇನ್ನು ಮುಂದೆ ಜಾಡಮಾಲಿ ಪದ ಬಳಸಬಾರದು. ಇದಕ್ಕೆ ಪರ್ಯಾಯವಾಗಿ 'ಸ್ವಚ್ಛತಾ ಸಹಾಯಕ' ಎಂದು ಸಂಬೋಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಸೇವೆ ಕಾಯಂಗೊಳಿಸಬೇಕು ಎಂದು ಕೋರಿ ತುಮಕೂರು ಜಿಲ್ಲಾ ಮೀಸಲು ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್‌ ಬಾಬು ಸೇರಿದಂತೆ ರಾಜ್ಯದ ವಿವಿಧೆಡೆಯ 31 ಠಾಣೆಗಳಲ್ಲಿನ ಜಾಡಮಾಲಿ ಪೊಲೀಸ್‌ ವರ್ಗ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ರಾಮಚಂದ್ರ ಡಿ.ಹುದ್ದಾರ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಎ ಅಹಮದ್‌ ಅವರು “ಸರ್ಕಾರ ಜಾಡಮಾಲಿ ಪದ ಬಳಸುತ್ತಿರುವುದು ಸರಿಯಲ್ಲ. ಆದ್ದರಿಂದ, ಈ ಪದಕ್ಕೆ ಪರ್ಯಾಯವಾಗಿ ಸ್ವಚ್ಛತಾ ನೌಕರ ಎಂಬುದನ್ನು ಬಳಸುವಂತೆ ಪೀಠ ಆದೇಶಿಸಬೇಕು” ಎಂದು ಕೋರಿದರು.

ಈ ಮನವಿ ಪುರಸ್ಕರಿಸಿ, ಅದಕ್ಕೆ ಶ್ಲಾಘಿಸಿದ ಪೀಠವು “ಸಮಾಜದಲ್ಲಿ ಅಮೂಲ್ಯ ಸೇವೆ ಸಲ್ಲಿಸುವ ಒಂದು ವರ್ಗದ ನೌಕರರನ್ನು ಉದ್ದೇಶಿಸುವ ಪದ ಗೌರವದಿಂದ ಕೂಡಿರಬೇಕು. ಹೀಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬಳಕೆಯ ಬದಲಾಗಿ 'ಸ್ವಚ್ಛತಾ ನೌಕರ' ಎಂಬುದಾಗಿಯೇ ಬಳಸಬೇಕು” ಎಂದು ನ್ಯಾಯಾಂಗ ಆದೇಶ ಹೊರಡಿಸಿತು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ರಾಜ್ಯದ ವಿವಿಧ ಪೊಲೀಸ್‌ ಠಾಣೆಯಲ್ಲಿ ಕಳೆದ ಹಲವು ದಶಕಗಳಿಂದ ಸ್ವೀಪರ್‌/ಜಾಡಮಾಲಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2018ರಲ್ಲಿ ಅವರನ್ನು ಸೇವೆಯಿಂದ ತೆಗೆದು ಹಾಕಲಾಗಿತ್ತು. ಅವರ ಉದ್ಯೋಗಕ್ಕೆ ಗುತ್ತಿಗೆ ಆಧಾರದಲ್ಲಿ ಅರೆಕಾಲಿಕ ನೌಕರರನ್ನು ನೇಮಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿತ್ತು.

ಈ ಕ್ರಮ ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣವು 2021ರಲ್ಲಿ ವಜಾಗೊಳಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಸೇವೆ ಕಾಯಂಗೊಳಿಸಲು ಮತ್ತು ಸೇವಾ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು. ಈ ಹಿಂದೆ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅರ್ಜಿದಾರರನ್ನು ಉದ್ಯೋಗದಿಂದ ತೆಗದು ಹಾಕುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಉದ್ಯೋಗಕ್ಕೆ ಮುಂದುವರಿಸಲು ಅವರಿಗೆ ಅನುಮತಿಸಬೇಕು ಮತ್ತು ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.