BJP MLA Basanagowda Patil Yatnal and Karnataka HC
BJP MLA Basanagowda Patil Yatnal and Karnataka HC 
ಸುದ್ದಿಗಳು

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧದ ಕೋಮು ದ್ವೇಷ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Bar & Bench

ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

ಪ್ರಕರಣ ರದ್ದುಪಡಿಸುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಯತ್ನಾಳ್ ಪರ ವಾದಿಸಿದ ವಕೀಲ ವೆಂಕಟೇಶ ಪಿ.ದಳವಾಯಿ ಅವರು ದೂರಿನಲ್ಲಿ ಆರೋಪಿಸಿರುವಂತೆ ಅರ್ಜಿದಾರರ ಭಾಷಣವು ಕೋಮು ಗಲಭೆಗೆ ಪ್ರಚೋದನೆ ನೀಡಿಲ್ಲ. ಏಕೆಂದರೆ, ಅವರ ಭಾಷಣದ ಬಳಿಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದ್ದರಿಂದ, ಎಫ್‌ಐಆರ್ ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ಪೀಠವು ವಿಚಾರಣೆಗೆ ತಡೆ ನೀಡಿತು. ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್ ಬಿ ಎನ್‌ ಜಗದೀಶ್‌ ಹಾಜರಿದ್ದರು. ಇದೇ ವೇಳೆ ಪೀಠವು ಅರ್ಜಿದಾರರು ಎಚ್ಚರಿಕೆಯಿಂದ ಮಾತನಾಡುವಂತೆ ಸಲಹೆ ನೀಡುವಂತೆ ಅವರ ವಕೀಲರಿಗೆ ಸೂಚಿಸಿತು.

ಪ್ರಕರಣದ ಹಿನ್ನೆಲೆ: ವಿಜಯಪುರ ನಗರದಲ್ಲಿ ಮಾರ್ಚ್‌ 3ರಂದು ಆಯೋಜಿಸಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ತೆಲಂಗಾಣದ ಗೋಶಾ ಮಹಲ್‌ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾಸಿಂಗ್ ಲೋಧಾ ಭಾಗವಹಿಸಿದ್ದರು. ವೇದಿಕೆಯಲ್ಲಿ ಭಾಷಣ ಮಾಡುವಾಗ ಇಬ್ಬರೂ ಪ್ರಚೋದನಕಾರಿ ಮತ್ತು ಎರಡು ಸಮುದಾಯಗಳ ಮಧ್ಯೆ ವೈಷಮ್ಯ ಹುಟ್ಟುಹಾಕುವ ಮಾತುಗಳನ್ನಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ಅಬೂಬಕರ್ ರಾಜೇಸಾಬ್ ಕಂಬಾಗಿ ದೂರು ನೀಡಿದ್ದರು. ಇದನ್ನು ಆಧರಿಸಿ ಗಾಂಧಿ ಚೌಕ್‌ ಠಾಣೆ ಪೋಲಿಸರು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.