ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಗುತ್ತಿಗೆ ಒಪ್ಪಂದದಲ್ಲಿ ಮಾಸಿಕ ಸಂಚಿತ ವೇತನದ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಲಿಬಾಲ್ ಹಾಗೂ ಬಾಸ್ಕೆಟ್ಬಾಲ್ ತರಬೇತುದಾರರ ವರ್ಗಾವಣೆ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ.
ವರ್ಗಾವಣೆ ಆದೇಶ ಪ್ರಶ್ನಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ದಾವಣಗೆರೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ವಾಲಿಬಾಲ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಿರ್ಜಾ ಷಾ ಜಮಾ, ಬೆಳಗಾವಿ ಉಪ ನಿರ್ದೇಶಕರ ಕಚೇರಿಯಲ್ಲಿ ಬಾಸ್ಕೆಟ್ಬಾಲ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಣ್ಣಗೌಡ ಎಸ್. ಪಾಟೀಲ್, ವಾಲಿಬಾಲ್ ತರಬೇತುದಾರ ಎನ್ ಎ ಮೀರಜ್ಕರ್, ಧಾರವಾಡ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬಾಸ್ಕೆಟ್ಬಾಲ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಪಿ ಕೆ ಹಸನ್ಕರ್ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ತರಬೇತುದಾರರು ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “ಅರ್ಜಿದಾರರು ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕಳೆದ 28 ವರ್ಷಗಳಿಂದ ಗುತ್ತಿಗೆ ಒಪ್ಪಂದದಲ್ಲಿ ಮಾಸಿಕ ಸಂಚಿತ ವೇತನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾರ್ವಜನಿಕ ಸೇವಕರಲ್ಲ (ಸರ್ಕಾರಿ ನೌಕರರು). ಆದಾಗ್ಯೂ 2017ರಲ್ಲಿ ಅರ್ಜಿದಾರರನ್ನು ಸೇರಿದಂತೆ 54 ಮಂದಿ ತರಬೇತುದಾರರನ್ನು ಸಾರ್ವತ್ರಿಕ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವೆ ಕಾಯಂಗೊಳಿಸಬೇಕು ಎಂಬ ಅರ್ಜಿದಾರರ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಹೀಗಿದ್ದಾಗ ನಾಲ್ವರು ಅರ್ಜಿದಾರರನ್ನು ವರ್ಗಾವಣೆಗೊಳಿಸಿ ಕ್ರೀಡಾ ಪ್ರಾಧಿಕಾರ 2025ರ ಜೂನ್ 26ರಂದು ಆದೇಶ ಹೊರಡಿಸಿದೆ. ಈ ಆದೇಶ ರದ್ದುಗೊಳಿಸಬೇಕು” ಎಂದು ಕೋರಿದರು.
ಇದೇ ವಿಚಾರದಲ್ಲಿ 2017ರ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆ ಇದ್ದಾಗ, ಪುನಾ ವರ್ಗಾವಣೆ ಮಾಡಿದ್ದು ಯಾವ ಆಧಾರದಲ್ಲಿ ಎಂದು ಸರ್ಕಾರಿ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿತು. ಮಾಹಿತಿ ಪಡೆದು ಉತ್ತರಿಸುವುದಾಗಿ ವಕೀಲರು ಹೇಳಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಜೂನ್ 26ರ ವರ್ಗಾವಣೆ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಿತು. ಅಲ್ಲದೇ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.