Baba ramdev, patanjali and Supreme court
Baba ramdev, patanjali and Supreme court  Baba ramdev (FB)
ಸುದ್ದಿಗಳು

ಸುಪ್ರೀಂ ಕಪಾಳಮೋಕ್ಷ: ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ

Bar & Bench

ದಾರಿ ತಪ್ಪಿಸುವ ಮತ್ತು ಅಲೋಪಥಿ ಪದ್ದತಿ ವಿರುದ್ಧ ಅವಹೇಳನಕರ ಜಾಹೀರಾತು ಅಭಿಯಾನ ಆರಂಭಿಸಿದ್ದಕ್ಕಾಗಿ  ಪತಂಜಲಿ ಆಯುರ್ವೇದ ಪ್ರಕಟಿಸಿದ್ದ ಬೇಷರತ್‌ ಕ್ಷಮೆಯಾಚನೆ ಜಾಹೀರಾತಿನ ಗಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದ ಒಂದು ದಿನದ ಬಳಿಕ ಜಾಹೀರಾತಿನ ಗಾತ್ರವನ್ನು ಹೆಚ್ಚಿಸಿ ಕಂಪೆನಿ ಕ್ಷಮಾಪಣೆಯನ್ನು ಪ್ರಕಟಿಸಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌, ಮಿಡ್‌ ಡೇ ಸೇರಿದಂತೆ ವಿವಿಧ ದಿನಪತ್ರಿಕೆಗಳಲ್ಲಿ ಇಂದು (ಬುಧವಾರ) ಪ್ರಕಟವಾದ ಜಾಹೀರಾತು ಈ ಹಿಂದೆ ಪತಂಜಲಿ ಕ್ಷಮೆ ಯಾಚಿಸಿದ್ದ ಜಾಹೀರಾತಿಗಿಂತಲೂ ಗಮನಾರ್ಹ ಪ್ರಮಾಣದಲ್ಲಿ ದೊಡ್ಡದಾಗಿದೆ.  

Patanjali apology printed in The Indian Express

ಕ್ಷಮೆಯಾಚನೆ ಜಾಹೀರಾತು ಸೂಕ್ಷ್ಮದರ್ಶಕದಲ್ಲಿ ನೋಡುವಷ್ಟು ಕಿರಿದಾಗಿ ಇರಬಾರದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರದ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದರ ಬೆನ್ನಿಗೇ ಕಾಲು ಪುಟದಷ್ಟು ದೊಡ್ಡ ಗಾತ್ರದಲ್ಲಿ ಕ್ಷಮಾಪಣಾ ಜಾಹೀರಾತು ಪ್ರಕಟಗೊಂಡಿದೆ.

Patanjali apology in Mid Day

ಈ ಹಿಂದಿನ ಜಾಹೀರಾತುಗಳನ್ನು ಕಂಡಿದ್ದ ನ್ಯಾಯಾಲಯ ಸುಲಭವಾಗಿ ಓದುವಂತೆ ಈ ಕ್ಷಮೆಯಾಚನೆ ಜಾಹೀರಾತು ದೊಡ್ಡದಾಗಿದೆಯೇ ಎಂದು ಪ್ರಶ್ನಿಸಿತ್ತು. ಮುಂದುವರೆದು, ಇದು ಪತಂಜಲಿ ಈ ಹಿಂದೆ ನೀಡಿದ್ದ ಅವಹೇಳನದ ಜಾಹಿರಾತಿನಷ್ಟೇ ದೊಡ್ಡದಾಗಿ ಇದೆಯೇ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಪ್ರಶ್ನಿಸಿತ್ತು.

ಪತಂಜಲಿ ಆಯುರ್ವೇದ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ‘‘ಇದಕ್ಕೆಲ್ಲಾ ಸಾಕಷ್ಟು ವೆಚ್ಚವಾಗುತ್ತದೆ.. ಲಕ್ಷಗಟ್ಟಲೆ ಹಣ ಬೇಕಾಗುತ್ತದೆ” ಎಂದಿದ್ದರು.

ಮುದ್ರಿತ ಕ್ಷಮಾಪಣೆ ಪ್ರತಿಗಳನ್ನು ಪತಂಜಲಿ ಪರೀಕ್ಷೆಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೀಠ ಆದೇಶಿಸಿತ್ತು.

"ದಯವಿಟ್ಟು ಜಾಹೀರಾತುಗಳನ್ನು ಕತ್ತರಿಸಿ ನಮಗೆ ನೀಡಿ.  ಅವುಗಳನ್ನು ದೊಡ್ಡದಾಗಿಸಿ ಕೊಡಬೇಡಿ. ನಾವು ನಿಜವಾದ ಗಾತ್ರ  ನೋಡಲು ಬಯಸುತ್ತೇವೆ. ಇದು ನಮ್ಮ ನಿರ್ದೇಶನ...ನೀವು (ಕ್ಷಮೆಯಾಚನೆ) ಮಾಡಿರುವುದನ್ನು ನಾವು ನೋಡ ಬಯಸುತ್ತೇವೆ" ಎಂದಿತ್ತು.

ನೀವು ಅದನ್ನು ಜಾಹೀರಾತು ನೀಡಿದಾಗ ಅದನ್ನು ಸೂಕ್ಷ್ಮದರ್ಶಕ ಯಂತ್ರ ಬಳಸಿ ಓದುವಂತಿರಬಾರದು ಎಂದು ನ್ಯಾಯಮೂರ್ತಿ ಕೊಹ್ಲಿ ಕುಟುಕಿದ್ದರು.

ಜಾಹೀರಾತು ಪತ್ರಿಕೆಗಳಲ್ಲಿ ಕಂಡೂ ಕಾಣದಂತಿರದೆ ಓದುವಂತೆಯೂ ಇರಬೇಕು ಎಂದ ನ್ಯಾಯಾಲಯ ಕ್ಷಮಾಯಾಚನೆ ಜಾಹೀರಾತಿನ ಗಾತ್ರ ಪರಿಶೀಲಿಸುವುದಕ್ಕಾಗಿ, ಮುದ್ರಿತ ಕ್ಷಮೆಯಾಚನೆಯ ಪ್ರತಿಗಳನ್ನು ಪತಂಜಲಿ ಸಲ್ಲಿಸಬೇಕು ಎಂದು ಸೂಚಿಸಿತ್ತು.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಮತ್ತು ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅವಹೇಳನಕಾರಿ ಅಭಿಯಾನ ನಡೆಸುತ್ತಿರುವುದನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆಗಳನ್ನು ನೀಡಿತ್ತು.