Bollywood singer Lucky Ali, IAS officer Rohini Sindhuri & Karnataka HC 
ಸುದ್ದಿಗಳು

ಐಎಎಸ್‌ ಅಧಿಕಾರಿ ಸಿಂಧೂರಿ ಅತ್ತೆಯಿಂದ ದೂರು: ಬಾಲಿವುಡ್‌ ಗಾಯಕ ಲಕ್ಕಿ ಅಲಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ಐಎಎಸ್‌ ಅಧಿಕಾರಿಯೇಕೆ ಲಕ್ಕಿ ಅಲಿ ಹಿಂದೆ ಬಿದ್ದಿದ್ದಾರೆ?” ಎಂದು ಪ್ರಶ್ನಿಸಿದ ನ್ಯಾಯಾಲಯ. ಇದಕ್ಕೆ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು “ಮಾಹಿತಿ ಪಡೆದು ವಾದಿಸಲಾಗುವುದು” ಎಂದು ತಿಳಿಸಿದರು.

Siddesh M S

ಬಾಲಿವುಡ್‌ ಗಾಯಕ ಮಕ್ಸೂದ್‌ ಅಲಿ ಅಲಿಯಾಸ್‌ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗ ಬೆಂಗಳೂರಿನ ವಾಸುದೇವಪುರದಲ್ಲಿರುವ (ಕೆಂಚೇನಹಳ್ಳಿ) ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್‌ ಹೊಡೆದು, ಗಿಡಗಳನ್ನು ನಾಶಪಡಿಸಿ ಸುಮಾರು ರೂ. 75 ಲಕ್ಷ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿರುವ ಎಫ್‌ಐಆರ್‌ ಮತ್ತು ಅದರ ಸಂಬಂಧಿತ ನ್ಯಾಯಾಂಗ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ತಡೆಯಾಜ್ಞೆ ವಿಧಿಸಿದೆ.

ಗಾಯಕ ಲಕ್ಕಿ ಅಲಿ ಮತ್ತು ಬೆಂಗಳೂರಿನ ಮೈಲಪ್ಪನಹಳ್ಳಿಯ ಶ್ರೀನಿವಾಸ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna

ಅರ್ಜಿದಾರರ ಪರ ವಕೀಲ ಶ್ರೀರಾಮ್‌ ತಿಮ್ಮಪ್ಪ ನಾಯಕ್‌ ಅವರು “ದೂರುದಾರೆಯಾದ ಬುಜ್ಜಮ್ಮ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆಯಾಗಿದ್ದಾರೆ. ಹೀಗಾಗಿ, ಪೊಲೀಸರು ಲಕ್ಕಿ ಅಲಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದರು.

“ಲಕ್ಕಿ ಅಲಿ ಅವರಿಗೆ ಸೇರಿದ ಟ್ರಸ್ಟ್‌ ಹೆಸರಿನಲ್ಲಿ 87 ಎಕರೆ ಆಸ್ತಿ ಇದೆ. ಇದರ ಸಮೀಪದಲ್ಲೇ ರೋಹಿಣಿ ಅವರ ಪತಿ ಜಿ ಸುಧೀರ್‌ ರೆಡ್ಡಿ ಅವರು ಲಕ್ಕಿ ಅಲಿ ಸಹೋದರನಿಂದ ಆಸ್ತಿ ಖರೀದಿಸಲಾಗಿದೆ ಎಂದು ಹೇಳುತ್ತಿದಾರೆ. ಈ ಸಂಬಂಧ 2016ರಿಂದ ರೋಹಿಣಿ ಅವರ ಪತಿ ಜಿ ಸುಧೀರ್‌ ರೆಡ್ಡಿ ಮತ್ತು ಲಕ್ಕಿ ಅಲಿ ಅವರ ನಡುವೆ ಸಿವಿಲ್‌ ದಾವೆ ನಡೆಯುತ್ತಿದೆ. ಬುಜ್ಜಮ್ಮ ಅವರ ಸೊಸೆಯಾಗಿರುವ ರೋಹಿಣಿ ಸಿಂಧೂರಿ ಅವರು ಅಧಿಕಾರ ಬಳಸಿ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ದಾರಿಯನ್ನು ಸಾರ್ವಜನಿಕ ಹಾದಿ ಎಂದು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಗೇಟ್‌ ಬೀಗ ತೆಗೆಯಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರು ಖಾಸಗಿ ವಾಹನದಲ್ಲಿ ಬಂದು ಬೆದರಿಕೆಯಾಕುತ್ತಿದ್ದಾರೆ. ಈ ಸಂಬಂಧ ಸಿಸಿಟಿವಿ ವಿಡಿಯೊ ಸಹ ನಮ್ಮ ಬಳಿ ಇದೆ” ಎಂದರು.

ಆಗ ಪೀಠವು “ಐಎಎಸ್‌ ಅಧಿಕಾರಿಯೇಕೆ ಲಕ್ಕಿ ಅಲಿ ಹಿಂದೆ ಬಿದ್ದಿದ್ದಾರೆ?” ಎಂದು ಪ್ರಶ್ನಿಸಿತು. ಇದಕ್ಕೆ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು “ಮಾಹಿತಿ ಪಡೆದು ವಾದಿಸಲಾಗುವುದು” ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು “ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ಮಾಹಿತಿ ಪಡೆದು ವಾದ ಮಾಡುವವರೆಗೆ ಲಕ್ಕಿ ಅಲಿ ಮತ್ತು ಇತರರ ವಿರುದ್ಧದ ಎಫ್‌ಐಆರ್‌ ಮತ್ತು ಆ ಸಂಬಂಧ ಬೆಂಗಳೂರಿನ 7ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಆದೇಶಿಸಿ, ವಿಚಾರಣೆಯನ್ನು ಡಿಸೆಂಬರ್‌ 16ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: 2012ರ ಏಪ್ರಿಲ್‌ 30ರಂದು ಪುತ್ರ ಜಿ ಸುಧೀರ್‌ ರೆಡ್ಡಿ ಅವರು ಯಲಹಂಕ ತಾಲ್ಲೂಕಿನ ವಾಸುದೇವಪುರ (ಕೆಂಚೇನಹಳ್ಳಿ) ಗ್ರಾಮದ ಸರ್ವೇ ನಂ. 25, 26, 27, 28 ಮತ್ತು 30ರಲ್ಲಿ 3 ಎಕರೆ ಜಮೀನನ್ನು ಮನ್ಸೂರ್‌ ಎಂಬವರಿಂದ ಖರೀದಿ ಮಾಡಿದ್ದು, ಅದನ್ನು ಈಚೆಗೆ ತಮಗೆ ದಾನ ಮಾಡಿಕೊಟ್ಟಿದ್ದಾರೆ. ಹೀಗಾಗಿ, ಕಾಂಪೌಂಡ್‌ ಕಟ್ಟಿ ಅಭಿವೃದ್ಧಿಪಡಿಸಿದ್ದು, ಅದನ್ನು ಮಕ್ಸೂದ್‌ ಅಲಿ ಅಲಿಯಾಸ್‌ ಲಕ್ಕಿ ಅಲಿ ಎಂಬವರು ಬಲವಂತವಾಗಿ ಸ್ವಾಧೀನಪಡಿಸಲು ಯತ್ನಿಸುತ್ತಿದ್ದಾರೆ. 2024ರ ನವೆಂಬರ್‌ 17 ಮತ್ತು 18ರಂದು ಕುಟುಂಬ ಸಮೇತ ಹೊರಗಡೆ ಹೋಗಿದ್ದಾಗ ಲಕ್ಕಿ ಅಲಿ ಮತ್ತು ಅವರ ಕಡೆಯವರು ತಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್‌ ಒಡೆದು ಹಾಕಿ, ಅಲ್ಲಿ ಬೆಳೆಸಿದ್ದ ಗಿಡಗಳನ್ನು ಕಿತ್ತು ಹಾಕಿ ಸುಮಾರು ರೂ.75 ಲಕ್ಷ ನಷ್ಟ ಉಂಟು ಮಾಡಿದ್ದಾರೆ. ಅಲ್ಲದೇ, ತಮ್ಮ ಜಮೀನಿಗೆ ಹೋಗಲು ಇರುವ ಸಾರ್ವಜನಿಕ ರಸ್ತೆಗೆ ಭದ್ರತೆ ಒದಗಿಸಿ ಓಡಾಟಕ್ಕೆ ನಿರ್ಬಂಧಿಸಿದ್ದಾರೆ ಎಂದು ಆರೋಪಿಸಿ ನವೆಂಬರ್‌ 19ರಂದು ಯಲಹಂಕ ನ್ಯೂ ಟೌನ್‌ ಠಾಣೆಗೆ ಬುಜ್ಜಮ್ಮ ದೂರು ನೀಡಿದ್ದರು.

ಇದನ್ನು ಆಧರಿಸಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳಾದ 126(2) (ಅಕ್ರಮವಾಗಿ ನಿರ್ಬಂಧ ವಿಧಿಸುವುದು), 3(5) (ಹಲವು ಮಂದಿಯಿಂದ ಪ್ರಯತ್ನ), 324(3) (ಸಾರ್ವಜನಿಕ ಆಸ್ತಿಗೆ ಹಾನಿ), 329(3) (ಅತಿಕ್ರಮ ಪ್ರವೇಶ) ಅಡಿ ಎಫ್‌ಐಆರ್‌ ದಾಖಲಿಸಿದ್ದಾರೆ.