High Court of Karnataka
High Court of Karnataka 
ಸುದ್ದಿಗಳು

ಐಎಂಎ ಹಗರಣ: ಐಪಿಎಸ್‌ ಅಧಿಕಾರಿ ಅಜಯ್ ಹಿಲೋರಿ ವಿರುದ್ಧದ ಪ್ರಕರಣ ವಜಾ ಮಾಡಿದ ಹೈಕೋರ್ಟ್‌

Bar & Bench

ಬಹುಕೋಟಿ ರೂಪಾಯಿಗಳ ಐಎಂಎ ಹಗರಣದಲ್ಲಿ ಆರೋಪಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ತಮ್ಮ ವಿರುದ್ದ ಪ್ರಕರಣ ರದ್ದು ಕೋರಿ ಅಜಯ್‌ ಹಿಲೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

“ಅರ್ಜಿದಾರರನ್ನು ಈಗಾಗಲೇ ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಪ್ರಕರಣ ವಜಾಗೊಳಿಸಲಾಗುತ್ತಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರ ಹಿಲೋರಿ ಅವರು 2020ರ ಸೆಪ್ಟೆಂಬರ್‌ 9ರಂದು ತಮ್ಮ ವಿರುದ್ಧ ವಿಚಾರಣೆಗೆ ರಾಜ್ಯ ಸರ್ಕಾರ ಪೂರ್ವಾನುಮತಿ ನೀಡಿದ್ದನ್ನು ಮತ್ತು 2020ರ ಜನವರಿ 7ರಂದು ಸಿಬಿಐ ತನಿಖೆಗೆ ಅನುಮತಿ ನೀಡಿದ್ದು, 2020ರ ನವೆಂಬರ್‌ 6ರಂದು ಸಲ್ಲಿಕೆಯಾಗಿದ್ದ ಪೂರಕ ಆರೋಪ ಪಟ್ಟಿಯಲ್ಲಿ ತಮ್ಮ ವಿರುದ್ದ ಸಂಜ್ಞೇಯ ತೆಗೆದುಕೊಂಡಿರುವುದು ಮತ್ತು ಕೆಪಿಐಡಿ ಕಾಯಿದೆ ಸೆಕ್ಷನ್‌ 9, ಐಪಿಸಿ ಸೆಕ್ಷನ್‌ಗಳಾದ 420, 406, 218, 409 ಮತ್ತು 120ಬಿ ಅಡಿ ತಮ್ಮ ವಿರುದ್ದ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ವಜಾ ಮಾಡುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಅಜಯ್ ಹಿಲೋರಿ 2017ರ ಮೇ 16ರಂದು ಐಎಂಎ ಪ್ರಕರಣದ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ಅದರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಡೆಸಿರುವ ತನಿಖೆಯ ವರದಿಯನ್ನು ಆಧರಿಸಿ ಐಎಂಎ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಅವರು ಶಿಫಾರಸ್ಸು ಮಾಡಿದ್ದರು. ಐಎಂಎ ನಿಯಮದ ಪ್ರಕಾರ ವ್ಯಾಪಾರ ವಹಿವಾಟು ನಡೆಸಿದೆ ಮತ್ತು ಈ ವಿಚಾರದಲ್ಲಿ ಆಯುಕ್ತರೇ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೇಳಿದ್ದರೆಂಬ ಸಂಗತಿ ತನಿಖೆ ವೇಳೆ ಬಹಿರಂಗವಾಗಿತ್ತು. ಅದನ್ನು ಆಧರಿಸಿ ಸಿಬಿಐ, ಅಜಯ್ ಹಿಲೋರಿ ಅವರ ಹೆಸರನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸೇರಿಸಿ, ಐಪಿಸಿ, ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಆರೋಪವನ್ನು ಹೊರಿಸಿತ್ತು.

ಅರ್ಜಿದಾರರನ್ನು ವಕೀಲ ಸ್ವರೂಪ್‌ ಆನಂದ್‌ ಆರ್‌ ಅವರು ಪ್ರತಿನಿಧಿಸಿದ್ದರು.