ಸುದ್ದಿಗಳು

ಭಾರತ ಎಂದಿಗೂ ಮುಸ್ಲಿಂ, ಕ್ರೈಸ್ತ ಅಥವಾ ಹಿಂದೂ ರಾಷ್ಟ್ರವಾಗಿರಲಿಲ್ಲ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಸಿಜೆ

Bar & Bench

ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಗೆ ʼಜಾತ್ಯತೀತ ʼ ಪದವನ್ನು ಸೇರಿಸಿದ್ದು ದೇಶದ ವಿಶಾಲ ಆಧ್ಯಾತ್ಮಿಕ ಸ್ವರೂಪವನ್ನು ಸಂಕುಚಿತಗೊಳಿಸಿ ಅದನ್ನು ಧರ್ಮದ ಮಟ್ಟಕ್ಕೆ ಇಳಿಸಿತು ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆ) ಪಂಕಜ್ ಮಿಥಲ್ ಅವರು ಇತ್ತೀಚೆಗೆ ತಿಳಿಸಿದರು.

ಎರಡು ಕೇಂದ್ರಾಡಳಿತ ಪ್ರದೇಶಗಳ ʼಅಧಿವಕ್ತ ಪರಿಷತ್ʼ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿದರು. ಭಾರತ ಸದಾ ಮತ್ತು ಈಗಲೂ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪ್ರಸ್ತಾವನೆಗೆ ʼಸಮಾಜವಾದಿ, ಜಾತ್ಯತೀತʼ ಪದಗಳ ಸೇರ್ಪಡೆʼ ಮಾಡಿದ್ದರಿಂದ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಸಮಾಜದ ಎಲ್ಲಾ ಸ್ತರಗಳಿಗೆ ಸೇರಿದ ನಾಗರಿಕರನ್ನು ರಕ್ಷಿಸಲು ಮತ್ತು ಕಾಯಲು ಭಾರತ ಸಮರ್ಥವಾಗಿರುವುದರಿಂದ ಅದರ ಸಮಾಜವಾದಿ ಸ್ವಭಾವ ಅಂತರ್ಗತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

"ಭಾರತವನ್ನು ಪಲ್ಲವರು, ಚಾಲುಕ್ಯರು, ಮೌರ್ಯರು, ಗುಪ್ತರು, ಕುಶಾನರು, ನಂತರ ಬಂದ ಮೊಘಲರು ಹಾಗೂ ಬ್ರಿಟಿಷರು ಸೇರಿದಂತೆ ಅಸಂಖ್ಯಾತ ಆಡಳಿತಗಾರರು ಆಳಿದರು, ಆದರೆ ಯಾವುದೇ ಅವಧಿಯಲ್ಲಿ ಭಾರತವನ್ನು ಧರ್ಮದ ಆಧಾರದ ಮೇಲೆ ವ್ಯಾಖ್ಯಾನಿಸಲು ಸಾಧ್ಯವಾಗಿಲ್ಲ. ಭಾರತ ಎಂದಿಗೂ ಮುಸ್ಲಿಂ, ಕ್ರೈಸ್ತ ಅಥವಾ ಹಿಂದೂ ರಾಷ್ಟ್ರವಾಗಿರಲಿಲ್ಲ. ಏಕೆ? ಏಕೆಂದರೆ ಪ್ರತಿಯೊಂದು ಅವಧಿಯಲ್ಲೂ ಭಾರತವು ಧಾರ್ಮಿಕ ಅಥವಾ ದೇವಭೂಮಿ ಎಂಬ ಕಲ್ಪನೆಯನ್ನು ಮೀರಿದೆ ಎಂಬುದಾಗಿ ನಂಬಲಾಗಿದೆ” ಎಂದರು.

ಸಂವಿಧಾನದ ಪ್ರಸ್ತಾವನೆಗೆ 'ಜಾತ್ಯತೀತ' ಪದವನ್ನು ಸೇರಿಸುವುದು ಬಹಳ ಸಂಕುಚಿತ ಮನೋಭಾವವಾಗಿದ್ದು ದೇಶವನ್ನು "ಭಾರತ ಆಧ್ಯಾತ್ಮಿಕ ಗಣರಾಜ್ಯ" ಎಂದು ಕರೆಯಬೇಕಿತ್ತು ಎಂಬುದಾಗಿ ಅವರು ಹೇಳಿದರು.

ಭಾರತವನ್ನು ಎಂದಿಗೂ ಧರ್ಮದಿಂದ ವ್ಯಾಖ್ಯಾನಿಸಲಾಗಿಲ್ಲ ಎಂದು ನ್ಯಾಯಮೂರ್ತಿ ಮಿಥಲ್ ಅಭಿಪ್ರಾಯಪಟ್ಟರು. ಏಕೆಂದರೆ ಭಾರತ ಆಧ್ಯಾತ್ಮಿಕ ದೇಶ ಎಂದು ಸದಾ ನಂಬಲಾಗಿದ್ದು ಇಂದಿಗೂ ಜನ ಆಧ್ಯಾತ್ಮವನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ ಎಂದು ಅವರು ಹೇಳಿದರು. ಸಂವಿಧಾನವನ್ನು ಜಾರಿಗೊಳಿಸುವವರು ಒಳ್ಳೆಯವರಾಗಿದ್ದರೆ ಸಂವಿಧಾನವೂ ಒಳ್ಳೆಯದಾಗಿರುತ್ತದೆ ಎಂಬ ಡಾ. ಅಂಬೇಡ್ಕರ್‌ ಅವರ ಮಾತುಗಳೊಂದಿಗೆ ಅವರು ತಮ್ಮ ಭಾಷಣ ಪೂರ್ಣಗೊಳಿಸಿದರು.

ಭಾಷಣವನ್ನು ಇಲ್ಲಿ ಆಲಿಸಿ: