ಸುದ್ದಿಗಳು

ಭಾರತೀಯ ಮಹಿಳೆ ಧನ್ಯೆ, ಮನುಸ್ಮೃತಿಯಂತಹ ಗ್ರಂಥಗಳಿಂದ ಆಕೆಗೆ ಅತ್ಯಂತ ಗೌರವಾನ್ವಿತ ಸ್ಥಾನ: ನ್ಯಾ. ಪ್ರತಿಭಾ ಎಂ ಸಿಂಗ್

Bar & Bench

ಭಾರತೀಯ ಸಂಸ್ಕೃತಿ ಮತ್ತು ಮನುಸ್ಮೃತಿಯಂತಹ ಧರ್ಮಗ್ರಂಥಗಳು ಮಹಿಳೆಯರಿಗೆ ಅತ್ಯಂತ ಗೌರವಾನ್ವಿತ ಸ್ಥಾನವನ್ನು ನೀಡಿರುವುದರಿಂದ ಭಾರತೀಯ ಮಹಿಳೆಯರು ಧನ್ಯರು ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ.

ಅಗೋಚರ ಅಡೆತಡೆಗಳ ಮುಖಾಮುಖಿ: ವಿಜ್ಞಾನ, ತಂತ್ರಜ್ಞಾನ,

. ಉದ್ಯಮಶೀಲತೆ ಹಾಗೂ ಗಣಿತ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಚರ್ಚೆ ಎಂಬ ವಿಷಯವಾಗಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಐಸಿಸಿಐ) ನವದೆಹಲಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣನ್ನು ಗೌರವಿಸದಿದ್ದಲ್ಲಿ ಪ್ರಾರ್ಥನೆಗೆ ಅರ್ಥವಿಲ್ಲ ಎಂದು ಮನುಸ್ಮೃತಿ ಸ್ವತಃ ಹೇಳುತ್ತದೆ. ನಮ್ಮ ಪೂರ್ವಜರು ಮತ್ತು ವೈದಿಕ ಗ್ರಂಥಗಳು ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ಚೆನ್ನಾಗಿ ತಿಳಿದಿದ್ದವು ಎಂದು ನಾನು ಭಾವಿಸುತ್ತೇನೆ. ಏಷ್ಯಾದ ದೇಶಗಳು ಮಹಿಳೆಯರನ್ನು ಗೌರವಿಸುವಲ್ಲಿ ಉತ್ತಮವಾಗಿವೆ. ಮಹಿಳೆಯರು ನಾಯಕತ್ವ ವಹಿಸುವ ಕುರಿತಂತೆ ಭಾರತ ಹೆಚ್ಚು ಪ್ರಗತಿಪರವಾಗಿದೆ ಎಂದು ಅವರು ಹೇಳಿದರು.

ಉದ್ಯೋಗಸ್ಥ ಮಹಿಳೆಯರು ಕುಟುಂಬ ವ್ಯವಸ್ಥೆಯ ಮೂಲ ಮೌಲ್ಯಗಳನ್ನು ಬಲಪಡಿಸಲು ಮತ್ತು ತಮ್ಮ ವೃತ್ತಿಜೀವನಕ್ಕೆ ಬೆಂಬಲ ಪಡೆಯುವ ಸಲುವಾಗಿ ಅವಿಭಕ್ತ ಕುಟುಂಬಗಳಲ್ಲಿ ವಾಸಿಸಬೇಕು. ಅವಿಭಕ್ತ ಕುಟುಂಬಗಳಲ್ಲಿನ ಪುರುಷರು ವಯೋವೃದ್ಧರೂ, ಜ್ಞಾನವೃದ್ಧರೂ ಆಗಿರುವುದರಿಂದ ಮಹಿಳೆಯರಿಗೆ ಪ್ರೋತಾಹ ನೀಡುತ್ತಾರೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಕುಟುಂಬ ಮುನ್ನಡೆಸುವ ಒತ್ತಡ ಪುರುಷರು ಮತ್ತು ಮಹಿಳೆಯರದ್ದಾಗಿದ್ದು ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಬದುಕಲು ಯುವತಿಯರು ತಮ್ಮನ್ನು ತಾವು ಹುರಿದುಂಬಿಸಿಕೊಳ್ಳಬೇಕು ಮತ್ತು ತಯಾರಿ ನಡೆಸಬೇಕು. ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ಉದ್ವೇಗವನ್ನು ಹೋಗಲಾಡಿಸಲು, ಸಮಸ್ಯೆ ಹಂಚಿಕೊಳ್ಳಲು ಹೆಚ್ಚು ಜನ ಬೇಕಿದ್ದು ಒತ್ತಡ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಆದ್ದರಿಂದ ದೊಡ್ಡ ಕುಟುಂಬಗಳತ್ತ ಹೊರಳಬೇಕಿದೆ ಎಂದು ಅವರು ತಿಳಿಸಿದರು.