P Chidambaram and Karti Chidambaram
P Chidambaram and Karti Chidambaram 
ಸುದ್ದಿಗಳು

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ಖುದ್ದು ಹಾಜರಾತಿಯಿಂದ ಚಿದಂಬರಂ, ಕಾರ್ತಿಗೆ ವಿನಾಯಿತಿ ನೀಡಿದ ದೆಹಲಿ ನ್ಯಾಯಾಲಯ

Bar & Bench

ಐಎನ್‌ಎಕ್ಸ್‌ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಖುದ್ದು ಹಾಜರಾತಿಯಿಂದ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೆಹಲಿಯ ವಿಶೇಷ ನ್ಯಾಯಾಲಯವು ಬುಧವಾರ ವಿನಾಯಿತಿ ನೀಡಿದೆ.

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಸಂಸತ್ ಸದಸ್ಯರು ತಾರಾ ಪ್ರಚಾರಕರಾಗಿದ್ದರು ಎಂಬ ಕಾರಣಕ್ಕೆ ಹಾಜರಾತಿಯಿಂದ ವಿನಾಯಿತಿ ಕೋರಲಾಗಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಮತ್ತೊಬ್ಬ ಆರೋಪಿ ಎಸ್‌ ಭಾಸ್ಕರ ರಾಮನ್‌ ಅವರಿಗೂ ಖುದ್ದು ಹಾಜರಾತಿಯಿಂದ ರೌಸ್‌‌ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶ ಎನ್‌ ಕೆ ನಾಗಪಾಲ್‌ ಅವರು ವಿನಾಯಿತಿ ನೀಡಿದ್ದರು.

ಆರೋಪಿತ ಕಂಪೆನಿಗಳ ನೋಂದಾಯಿತ ಪ್ರತಿನಿಧಿಗಳಿಗೂ ಖುದ್ದು ಹಾಜರಾತಿಯಿಂದ ವಿನಾಯಿತಿಯನ್ನು ನೀಡಲಾಗಿತ್ತು. ಎಲ್ಲಾ ವಿನಾಯಿತಿಗಳು ಇಂದಿಗೆ ಮಾತ್ರ ಸೀಮಿತವಾಗಿರುತ್ತವೆ ಎಂದು ನ್ಯಾಯಾಲಯ ಹೇಳಿದೆ. ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯನ್ನು ಪರಿಗಣಿಸಿ ಐಎನ್‌ಎಕ್ಸ್‌ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿದ್ದ ಆರೋಪಿ ಪೀಟರ್‌ ಮುಖೇರ್ಜಿಯಾ ಅವರು ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ. ಆರೋಪಪಟ್ಟಿಯ ಪ್ರತಿಗಳನ್ನು ಎಲ್ಲಾ ಆರೋಪಿಗಳು ಪೂರೈಸುವಂತೆ ನ್ಯಾಯಾಲಯ ಸೂಚಿಸಿದ್ದು, ದಾಖಲೆಗಳ ಪರಿಶೀಲನೆಯ ದಿನಾಂಕವನ್ನು ಏಪ್ರಿಲ್‌ 16ಕ್ಕೆ ನಿಗದಿಗೊಳಿಸಿದೆ.