ಸುದ್ದಿಗಳು

ಫೋನ್‌ ಕದ್ದಾಲಿಕೆ ಪ್ರಕರಣ: ಬಿ ರಿಪೋರ್ಟ್‌ಗೆ ಭಾಸ್ಕರ್‌ ರಾವ್ ಕಾನೂನಾತ್ಮಕ ಆಕ್ಷೇಪ, ವರದಿ ಸಲ್ಲಿಸದ ಸಿಬಿಐ

Bar & Bench

ಹಿರಿಯ ಐಪಿಎಸ್‌ ಅಧೀಕಾರಿ ಭಾಸ್ಕರ್‌ ರಾವ್‌ ಅವರು ಬೆಂಗಳೂರಿನ ನ್ಯಾಯಾಲಯವೊಂದಕ್ಕೆ ಪ್ರತಿರೋಧ ಅರ್ಜಿ ಸಲ್ಲಿಸಿದ್ದರಿಂದಾಗಿ ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಭಾರಿ ಸದ್ದು ಮಾಡಿದ್ದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್‌ ಸಲ್ಲಿಸದೆ ಮರಳಿದ್ದಾರೆ.

ಎಡಿಜಿಪಿ ಅಲೋಕ್‌ ಕುಮಾರ್‌ ಹಾಗೂ ಪತ್ರಕರ್ತೆ ಕುಶಾಲಾ ಅವರ ವಿರುದ್ಧ ಸೂಕ್ತ ಸಾಕ್ಷ್ಯವಿದ್ದರೂ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ. ಇಬ್ಬರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಗರದ ಸಿಟಿ ಸಿವಿಲ್‌ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಪ್ರಕರಣವನ್ನು ಮತ್ತೊಮ್ಮೆ ತನಿಖೆ ಮಾಡಬೇಕು. ಇಬ್ಬರ ವಿರುದ್ಧ ಸಾಕ್ಷ್ಯ ಇದೆ. ಆದರೂ ಬಿ ರಿಪೋರ್ಟ್ ಸಲ್ಲಿಕೆಗೆ ಸಿಬಿಐ ಮುಂದಾಗಿದ್ದು ಸರಿಯಲ್ಲ ಎಂದು ಭಾಸ್ಕರ್‌ ರಾವ್‌ ಅವರು ಮಾಧ್ಯಮಗಳಿಗೆ ತಿಳಿಸಿದರು.

"ಲಾಬಿ ಮಾಡುತ್ತಿದ್ದೇನೆ ಎಂದು ಆರೋಪಿಸಿರುವ ಆಡಿಯೊ ಹೊರಬಂದಿತ್ತು. ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು. ಪ್ರಕರಣದ ದೂರುದಾರರಾಗಿದ್ದ ಕುಲದೀಪ್‌ ಕುಮಾರ್‌ ಜೈನ್‌ ಅವರು ಈಗ ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಕೆಗೆ ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ. ಆದರೆ ಇದು ಜೈನ್‌ ಅವರ ಪ್ರಕರಣವಲ್ಲ, ಬದಲಿಗೆ ಸರ್ಕಾರದ ಪ್ರಕರಣ. ಸಿಬಿಐ, ಕಾನೂನು ಹಾಗೂ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ” ಎಂದು ಅವರು ಹೇಳಿದರು.

ಫೋನ್‌ ಕದ್ದಾಲಿಕೆ ಪ್ರಕರಣ 2019ರ ಆಗಸ್ಟ್‌ನಲ್ಲಿ ಪೊಲೀಸ್‌ ಅಧಿಕಾರಿಗಳಿಂದ ಬೆಳಕಿಗೆ ಬಂದಿತ್ತು. ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಪೊಲೀಸ್‌ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿತ್ತು ಎಂಬ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಎರಡು ವರ್ಷಗಳ ಹಿಂದೆ ತೀವ್ರ ರಾಜಕೀಯ ಸಂಚಲನ ಸೃಷ್ಟಿಸಿದ್ದ ಫೋನ್‌ ಕದ್ದಾಲಿಕೆ ಪ್ರಕರಣವನ್ನು ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸಿಬಿಐ ತನಿಖೆಗೆ ವಹಿಸಿತ್ತು. ಎಫ್‌ಐಆರ್‌ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ನಡೆಸಿದ್ದರು. ಬಳಿಕ ಸಿಬಿಐ ಅಧಿಕಾರಿಗಳಿಂದ ಐಪಿಎಸ್‌ ಅಧಿಕಾರಿಗಳ ಮನೆ ಮೇಲೆ ದಾಳಿ ಕೂಡ ನಡೆದಿತ್ತು.