ಸುದ್ದಿಗಳು

ನ್ಯಾ. ಉತ್ತಮ್ ಆನಂದ್ ಸಾವಿನ ಕುರಿತು ತ್ವರಿತ, ವೃತ್ತಿಪರ ತನಿಖೆಯಾಗಬೇಕು: ಎಸ್ಐಟಿಗೆ ಜಾರ್ಖಂಡ್ ಹೈಕೋರ್ಟ್ ಸೂಚನೆ

Bar & Bench

ಧನಬಾದ್ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಆಗಸ್ಟ್ 3ರೊಳಗೆ ವರದಿ ಸಲ್ಲಿಸುವಂತೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ.

ಕಳೆದ ಬುಧವಾರ ಆಟೋ ರಿಕ್ಷಾ ಡಿಕ್ಕಿಯಿಂದಾಗಿ ಸಾವನ್ನಪ್ಪಿದ್ದ ನ್ಯಾ. ಆನಂದ್‌ ಅವರ ಸಾವಿಗೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ರವಿ ರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

ಇದೇ ವೇಳೆ "ಪ್ರಕರಣದಲ್ಲಿ ತ್ವರಿತ, ನ್ಯಾಯಯುತ ಮತ್ತು ವೃತ್ತಿಪರ ತನಿಖೆಯನ್ನು ನಾವು ಬಯಸುತ್ತೇವೆ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಉತ್ತಮ್ ಆನಂದ್ ಅವರು ಜರಿಯಾ ಶಾಸಕ ಸಂಜೀವ್ ಸಿಂಗ್ ಅವರ ಆಪ್ತ ರಂಜಯ್ ಸಿಂಗ್ ಕೊಲೆ ಪ್ರಕರಣ ಸೇರಿದಂತೆ ಕೆಲ ಮಹತ್ವದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದರು. ಇದಲ್ಲದೆ, ಇತ್ತೀಚೆಗೆ ಉತ್ತರ ಪ್ರದೇಶದ ಪಾತಕಿ ಅಮನ್ ಸಿಂಗ್‌ನ ಇಬ್ಬರು ಸಹಚರರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದರು.

ಮೊದಲು ಇದನ್ನು ಅಪಘಾತ ಎಂದೇ ನಂಬಲಾಗಿತ್ತಾದರೂ ರಸ್ತೆಯ ಅಂಚಿನಲ್ಲಿ ಬೆಳಗಿನ ವಾಯುವಿಹಾರದಲ್ಲಿ ತೊಡಗಿದ್ದ ಅವರನ್ನು ಉದ್ದೇಶಪೂರ್ವಕವಾಗಿ ಆಟೊವೊಂದು ಡಿಕ್ಕಿ ಹೊಡೆದು ಬೀಳಿಸಿರುವುದು ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿತ್ತು.

ಸಂಜಯ್ ಎ ಲತ್ಕರ್ ಅವರ ನೇತೃತ್ವದ ಎಸ್‌ಐಟಿಗೆ ಸೂಕ್ತ ಆದೇಶ/ನಿರ್ದೇಶನ ನೀಡುವಂತೆ ಹೈಕೋರ್ಟ್ ತನ್ನ ಆದೇಶದಲ್ಲಿ, ಸೂಚಿಸಿದ್ದು ಫೆಬ್ರವರಿ 2020ರ ಆರಂಭದಿಂದ ಜಾರ್ಖಂಡ್‌ನಲ್ಲಿ ಅಪರಾಧ ದರದ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.

“ಮುಂದಿನ ವಿಚಾರಣೆ ದಿನದಂದು ವರದಿ ಸಲ್ಲಿಸಲು ನಾವು ಎಸ್‌ಐಟಿಗೆ ನಿರ್ದೇಶನ ನೀಡುತ್ತಿದ್ದೇವೆ. . ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸರು ಯಾವಾಗ ಸ್ವೀಕರಿಸಿದರು ಮತ್ತು ಎಫ್‌ಐಆರ್ ದಾಖಲಿಸಿದ ಸಮಯವನ್ನು ವಿವರಿಸುವ ಅಫಿಡವಿಟ್‌ ಸಲ್ಲಿಸಲಿ. ಮರಣೋತ್ತರ ಪರೀಕ್ಷೆಯ ವಿಡಿಯೊ ಗ್ರಾಫ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನೂ ನಮಗೆ ನೀಡಲಿ. 2020ರ ಜನವರಿ ನಂತರ ಜಾರ್ಖಂಡ್ ರಾಜ್ಯದ ಅಪರಾಧ ದರ ಜಾರ್ಖಂಡ್‌ ಡಿಜಿಪಿ ತಿಳಿಸಲಿ” ಎಂದು ನ್ಯಾಯಾಲಯ ಆದೇಶಿಸಿತು.