CJI NV Ramana
CJI NV Ramana 
ಸುದ್ದಿಗಳು

ಸ್ವತಂತ್ರ ಸಂಸ್ಥೆಗಳ ಮೇಲೆ ಸಾಮಾಜಿಕ ಮಾಧ್ಯಮದ ಪ್ರವೃತ್ತಿ ಬೀರುವ ಪರಿಣಾಮದ ಬಗ್ಗೆ ಚರ್ಚೆ ಅಗತ್ಯ: ಸಿಜೆಐ ರಮಣ

Bar & Bench

ಕಾರ್ಯಾಂಗದ ಒತ್ತಡದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವಾಗ ಸಾಮಾಜಿಕ ಮಾಧ್ಯಮ ಪ್ರವೃತ್ತಿಗಳು ಸಂಸ್ಥೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಬಗ್ಗೆಯೂ ಯೋಚಿಸುವ ಸಮಯ ಬಂದಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಬುಧವಾರ ತಿಳಿಸಿದರು.

ಪಿಡಿ ದೇಸಾಯಿ ಸ್ಮೃತಿ 17ನೇ ಉಪನ್ಯಾಸ ಮಾಲಿಕೆಯ ಅಂಗವಾಗಿ “ನ್ಯಾಯಿಕ ಆಡಳಿತ” ವಿಷಯವಾಗಿ ಅವರು ಮಾತನಾಡಿದರು.

ಸರ್ಕಾರದ ಕ್ರಮಗಳನ್ನು ನಿಯಂತ್ರಿಸಲು ಮುಕ್ತ ನ್ಯಾಯಾಂಗ ಎಷ್ಟು ಮಹತ್ವದ್ದು ಎಂಬುದನ್ನು ವಿವರಿಸಿದ ಅವರು “ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು ಅತ್ಯವಶ್ಯವಾಗಿದ್ದು ಎಲ್ಲಾ ಬಾಹ್ಯ ಬೆಂಬಲ ಮತ್ತು ಒತ್ತಡ ತಡೆದುಕೊಳ್ಳುವುದು ಬಹುಮುಖ್ಯ. ಸರ್ಕಾರದ ಅಧಿಕಾರ ಮತ್ತು ಕ್ರಿಯೆಯನ್ನು ನಿಯಂತ್ರಿಸಲು ನ್ಯಾಯಾಂಗ ಸ್ವತಂತ್ರವಾಗಿರಬೇಕು ಎಂದರು.

ಕಾರ್ಯಾಂಗದ ಒತ್ತಡದ ಬಗ್ಗೆ ಸಾಕಷ್ಟು ಮಾತುಕತೆಗಳು ನಡೆಯುತ್ತಿರುವಾಗ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ವರ್ಧಿತವಾದ ಸಾರ್ವಜನಿಕ ಅಭಿಪ್ರಾಯದಿಂದ ತಾವು ಪ್ರಭಾವಿತರಾಗದಂತೆ ನ್ಯಾಯಾಧೀಶರು ನೋಡಿಕೊಳ್ಳಬೇಕು ಎಂದರು.

ಅಗಾಧ ವಿಸ್ತರಣಾ ಸಾಮರ್ಥ್ಯ ಹೊಂದಿರುವ ನವ ಮಾಧ್ಯಮ ಪರಿಕರಗಳು ಸರಿ- ತಪ್ಪು, ಒಳಿತು- ಕೆಡುಕು ಹಾಗೂ ಅಸಲಿ- ನಕಲಿ ನಡುವಣ ವ್ಯತ್ಯಾಸ ಕಂಡುಹಿಡಿಯಲು ಅಸಮರ್ಥವಾಗಿವೆ ಎಂದು ಹೇಳಿದರು.

ಆದ್ದರಿಂದ ಹೀಗೆ ಹೆಚ್ಚಾದ ಸದ್ದು ಯಾವುದು ಸರಿ ಮತ್ತು ಬಹುತ್ವ ಯಾವುದನ್ನು ನಂಬುತ್ತದೆ ಎಂಬುದನ್ನು ಪ್ರತಿಬಿಂಬಿಸುವುದಿಲ್ಲ ಎಂಬ ವಾಸ್ತವಾಂಶವನ್ನು ನ್ಯಾಯಾಧೀಶರು ಗಮನದಲ್ಲಿರಿಸಿಕೊಳ್ಳಬೇಕು ಎಂದು ಸಿಜೆಐ ಅಭಿಪ್ರಾಯಪಟ್ಟರು.

ಬ್ರಿಟಿಷರ ಆಳ್ವಿಕೆ ನ್ಯಾಯಿಕ ಆಡಳಿತಕ್ಕಿಂತ ಕಾನೂನನ್ನು ಬಳಸಿ ಆಳುವುದರ ದ್ಯೋತಕವಾಗಿತ್ತು ಎಂದರು. "ಬ್ರಿಟಿಷರು ಕಾನೂನನ್ನು ರಾಜಕೀಯ ದಬ್ಬಾಳಿಕೆಯ ಸಾಧನವಾಗಿ ಬಳಸಿದರು. ತಮಗೆ ಮತ್ತು ಭಾರತೀಯರಿಗೆ ಬೇರೆ ಬೇರೆ ನಿಯಮಗಳನ್ನು ರೂಪಿಸಿ ಅವುಗಳನ್ನು ಅಸಮಾನ ರೀತಿಯಲ್ಲಿ ಜಾರಿಗೊಳಿಸಿದರು. ಭಾರತೀಯ ವಿಚಾರಗಳನ್ನು ನಿಯಂತ್ರಿಸುವ ಗುರಿ ಹೊಂದಿದ್ದ ಇದು ನ್ಯಾಯಿಕ ಆಡಳಿತಕ್ಕಿಂತಲೂ ಕಾನೂನು ಬಳಸಿ ನಡೆಸುವ ಆಡಳಿತಕ್ಕೆ ಹೆಸರಾದ ವ್ಯವಹಾರವಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯಕ್ಕಾಗಿನ ನಮ್ಮ ಹೋರಾಟ ಕಾನೂನು ಬಳಸಿ ನಡೆಸಿದ ಆಡಳಿತದಿಂದ ನ್ಯಾಯಿಕ ಆಡಳಿತದೆಡೆಗಿನ ಪಯಣವಾಗಿದೆ" ಎಂದು ಅವರು ಹೇಳಿದರು.

ಕೋವಿಡ್‌ ಬಿಕ್ಕಟ್ಟನ್ನು ರಾಷ್ಟ್ರ ಎದುರಿಸುತ್ತಿರುವ ರೀತಿಯನ್ನು ವಿವರಿಸಿದ ಅವರು ಜನರ ಕಲ್ಯಾಣ ಮತ್ತು ರಕ್ಷಣೆಗಾಗಿ ನ್ಯಾಯಿಕ ಆಡಳಿತವನ್ನು ಎಲ್ಲಿಯವರೆಗೆ ಕೊಂಡೊಯ್ಯಬಹುದು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಕರೆ ನೀಡಿದರು.

“ನಾನುಅದರಮೌಲ್ಯಮಾಪನಮಾಡುವಉದ್ದೇಶ ಹೊಂದಿಲ್ಲ. ನನ್ನ ಕಚೇರಿ ಮತ್ತು ನನ್ನ ಮನೋಧರ್ಮಗಳೆರಡೂ ಹಾಗೆ ಮಾಡುವುದನ್ನು ತಡೆಯುತ್ತವೆ. ಆದರೆ ಈ ಸಾಂಕ್ರಾಮಿಕವು ಮುಂದಿನ ದಶಕಗಳಲ್ಲಿಇನ್ನೂ ಹೆಚ್ಚಿನ ಬಿಕ್ಕಟ್ಟುಗಳ ಮುನ್ನಡಿಯಷ್ಟೇ ಆಗಿರಬಹುದು. ಖಂಡಿತವಾಗಿ ನಾವು ಕನಿಷ್ಠ ಎಲ್ಲಿ ಸರಿ ಮಾಡಿದ್ದೇವೆ ಎಲ್ಲಿ ತಪ್ಪಸೆಗಿದ್ದೇವೆ ಎಂಬಲ್ಲಿಯಿಂದಾದರೂ ಪ್ರಕ್ರಿಯೆಯನ್ನು ಆರಂಭಿಸಬೇಕಿದೆ” ಎಂದು ಕಿವಿಮಾತು ಹೇಳಿದರು.

ಕವಿ ರವೀಂದ್ರನಾಥ ಟ್ಯಾಗೋರರ ಪ್ರಸಿದ್ಧ ಕವನವೊಂದನ್ನು ವಾಚಿಸುವುದರೊಂದಿಗೆ ಅವರು ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು.