AAB recently felicitated Justice S Sujatha. Hc Judge B Verappa, AAB office bearers were present.
AAB recently felicitated Justice S Sujatha. Hc Judge B Verappa, AAB office bearers were present.  
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌ ಸುಜಾತಾ ಅವರಿಗೆ ಬೀಳ್ಕೊಡುಗೆ

Bar & Bench

ಮುಂದಿನ ತಿಂಗಳು 19ರಂದು ಸೇವೆಯಿಂದ ನಿವೃತ್ತಿ ಹೊಂದಲಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌ ಸುಜಾತಾ ಅವರಿಗೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು. ನ್ಯಾಯಾಲಯಕ್ಕೆ ಸೋಮವಾರದಿಂದ ಬೇಸಿಗೆ ರಜೆ ಆರಂಭವಾಗಲಿದ್ದು, ಮೇ 23ರಿಂದ ಮತ್ತೆ ಪೂರ್ಣ ನ್ಯಾಯಾಲಯದ ಕಾರ್ಯಾರಂಭ ಮಾಡಲಿರುವುದರಿಂದ ಮುಂಚಿತವಾಗಿ ನ್ಯಾ. ಸುಜಾತಾ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಕೊಠಡಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಮತ್ತು ಬೆಂಗಳೂರು ವಕೀಲರ ಸಂಘದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ನ್ಯಾಯಮೂರ್ತಿಗಳು ಹಾಗೂ ಕಾನೂನು ವಲಯದ ಪ್ರಮುಖರು, ವಕೀಲರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನ್ಯಾಯಮೂರ್ತಿ ಸುಜಾತಾ ಅವರ ನ್ಯಾಯಾಂಗ ಸೇವೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಸ್ಮರಿಸಿದರು.

ನ್ಯಾ. ಸುಜಾತಾ ಅವರು ಕಳೆದ ಏಳು ವರ್ಷಗಳಿಂದ ನ್ಯಾಯಮೂರ್ತಿಯಾಗಿದ್ದ ದಿನಗಳನ್ನು ನೆನೆದರು. ವೃತ್ತಿ ಬದುಕಿನ ಸವಾಲು, ವೈಯಕ್ತಿಕ ಬದುಕು, ಕೋವಿಡ್‌ ದಿನಗಳ ಅನುಭವದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ ಅವರು ವರ್ಚುವಲ್‌ ಕಲಾಪ ವಾಸ್ತವವಾಗಿರುವುದರಿಂದ ಹೆಚ್ಚಿನ ಸೌಲಭ್ಯ ಕಲ್ಪಿಸುವ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿದರು. ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ, ಹಿರಿಯ ವಕೀಲರ ಸಹಾಯ ಮತ್ತಿತರ ವಿಧಾನಗಳ ಕುರಿತು ಪ್ರಸ್ತಾಪಿಸಿದರು.

ನ್ಯಾ. ಸುಜಾತಾ ಅವರು 1960ರ ಮೇ 20ರಂದು ಜನಿಸಿದರು. ಬೆಂಗಳೂರಿನ ಶ್ರೀ ಜಗದ್ಗರು ರೇಣುಕಾ ಕಾನೂನು ಕಾಲೇಜಿನಿಂದ ಪದವಿ ಪಡೆದರು. ಹೈಕೋರ್ಟ್ ವಕೀಲರಾಗಿ ವೃತ್ತಿ ಆರಂಭಿಸಿದ ಅವರು, ತೆರಿಗೆ, ಅಬಕಾರಿ, ಸಿವಿಲ್, ಸಾಂವಿಧಾನಿಕ, ಶಿಕ್ಷಣ, ಸೇವಾ ಮತ್ತು ಕಾರ್ಮಿಕ ಕಾನೂನಿನಲ್ಲಿ ಪರಿಣಿತರಾದರು. 1995 ರಿಂದ 2000 ಮತ್ತು 2005 ರಿಂದ 2014ರ ನಡುವೆ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು.
ನ್ಯಾ. ಸುಜಾತಾ ಅವರು 2015ರ ಜನವರಿ 2ರಂದು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2015ರ ಡಿಸೆಂಬರ್‌ 30ರಂದು ಅವರ ನೇಮಕಾತಿಯನ್ನು ಕಾಯಂಗೊಳಿಸಲಾಗಿತ್ತು.