ಸುದ್ದಿಗಳು

ರಾಜ್ಯದಲ್ಲಿ ನಾಳೆಯಿಂದ ಮುಂದಿನ ಹದಿನಾಲ್ಕು ದಿನಗಳವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ ಸರ್ಕಾರ

Bar & Bench

ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಬುಧವಾರ ರಾತ್ರಿಯಿಂದ ಮೇ 4ರವರೆಗೆ ಒಟ್ಟು 14 ದಿನಗಳ ಕಾಲ ಕಠಿಣ ನಿಯಮಗಳು ಜಾರಿಯಲ್ಲಿರಲಿವೆ. ರಾತ್ರಿ ಕರ್ಫ್ಯೂ ಮತ್ತಷ್ಟು ಬಿಗಿ ನಿಯಮಗಳೊಂದಿಗೆ ಮುಂದುವರೆಯಲಿದೆ.

ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ವೇಳೆ ಎಲ್ಲೆಡೆ ಸೆಕ್ಷನ್‌ 144 ಜಾರಿಯಲ್ಲಿರುತ್ತದೆ. ವಾರಾಂತ್ಯದ ಕರ್ಫ್ಯೂ ವೇಳೆ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಜನರ ಓಡಾಟಕ್ಕೆ ನಿರ್ಬಂಧವಿರುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು ಮಂಗಳವಾರ ರಾತ್ರಿ ನೂತನ ಮಾರ್ಗಸೂಚಿ ಪ್ರಕಟಿಸಿದರು.

ಮಾರ್ಗಸೂಚಿ ಜಾರಿಗೆ ತರುವ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಬಗೆಯ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸರ್ಕಾರ ಸೂಚಿಸಿದೆ. ಸಿನಿಮಾ ಹಾಲ್‌, ಮನರಂಜನಾ ಪಾರ್ಕ್‌ಗಳು, ಈಜುಕೊಳ, ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿರುತ್ತದೆ.

ಪೂಜೆಗೆ ಅವಕಾಶಗಳಿದ್ದರೂ ಧಾರ್ಮಿಕ ಕೇಂದ್ರಗಳಲ್ಲಿ ಜನರು ಸೇರಲು ಅವಕಾಶ ಇರುವುದಿಲ್ಲ. ಹೋಟೆಲ್‌, ಬಾರ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿಯೂ ಇದೇ ಬಗೆಯ ನಿರ್ಬಂಧ ವಿಧಿಸಲಾಗಿದ್ದು ಅಂತಹ ಸ್ಥಳಗಳಲ್ಲಿ ಆಹಾರ ಮದ್ಯವನ್ನು ಪಾರ್ಸೆಲ್‌ ಪಡೆಯಬಹುದಾಗಿದೆ.

ಇನ್ನು ಬೆಂಗಳೂರಿನ ಮಾರುಕಟ್ಟೆಗಳನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು ಕೋವಿಡ್‌ ನಿಯಮಗಳನ್ನು ಪಾಲಿಸಿ ಅಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳೂ ಸೇರಿದಂತೆ ಯಾವುದೇ ಬಗೆಯ ಸಭೆ ಸಮಾರಂಭಗಳನ್ನು ಆಯೋಜಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಟ್ಟಡ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ.