ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣ ಕರ್ತ್ಯವಕ್ಕೆ ಹಿಂದಿರುಗಿ ಗಣತಿ ಕಾರ್ಯದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳುವಂತೆ ಬೆಂಗಳೂರಿನ ಬ್ರಿಗೇಡ್ ಶಾಲೆಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದ್ದು, ಶಾಲೆಯ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಜನಗಣತಿ ಆಯುಕ್ತರಿಗೆ ಆದೇಶಿಸಿದೆ.
ಜನಗಣತಿಗೆ ಶಿಕ್ಷಕರನ್ನು ನಿಯೋಜನೆ ಮಾಡದ ಹಿನ್ನೆಲೆಯಲ್ಲಿ ಜೆ ಪಿ ನಗರದ 7ನೇ ಹಂತದಲ್ಲಿರುವ ದಿ ಬ್ರಿಗೇಡ್’ ಶಾಲೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿ ಏಪ್ರಿಲ್ 9ರಂದು ಆದೇಶಿಸಿದ್ದನ್ನು ಪ್ರಶ್ನಿಸಿ ಶಾಲೆಯ ಪ್ರಾಂಶುಪಾಲರಾದ ಶುಭ್ರಾ ಜೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ರಜೆಯಲ್ಲಿರುವ ಶಿಕ್ಷಕರು ಮುಂದಿನ ಒಂದು ವಾರದಲ್ಲಿ ಹಿಂದಿರುಗುವಂತೆ ಸೂಚನೆ ನೀಡಿ, ಜನಗಣತಿ ಆಯುಕ್ತರ ಮುಂದೆ ವರದಿ ಮಾಡಿಕೊಳ್ಳುವುದನ್ನು ಖಾತರಿಪಡಿಸಬೇಕು” ಎಂಬ ಷರತ್ತಿನೊಂದಿಗೆ ಶಾಲೆಯ ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯಿದೆಯ ಸೆಕ್ಷನ್ 11ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತಹ ಕ್ರಮಕ್ಕೆ ಮುಂದಾಗಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಜನಗಣತಿ 10 ರಿಂದ 11 ವರ್ಷಗಳಿಗೊಮ್ಮೆ ನಡೆಯುತ್ತದೆ. ಪ್ರತಿ ಮನೆಗೂ ಭೇಟಿ ನೀಡಿ ಮಾಹಿತಿ ಪಡೆದು ವಿವರಗಳನ್ನು ಲಿಖಿತವಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ, ಶಾಲೆಯ ಮುಖ್ಯಸ್ಥರೇ ಈ ರಿತಿಯಲ್ಲಿ ವರ್ತಿಸಲು ಪ್ರಾರಂಭಿಸಿದರೆ, ಸರ್ಕಾರ ಗಣತಿ ಕಾರ್ಯ ಪೂರ್ಣಗೊಳಿಸುವುದಾದರೂ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದ ಪೀಠವು ‘ಮುಂದಿನ ವಿಚಾರಣೆ ವೇಳೆಗೆ ಅರ್ಜಿದಾರರ ಶಾಲೆಯಲ್ಲಿ ಲಭ್ಯವಿರುವ ಶಿಕ್ಷಕರ ಪಟ್ಟಿಯನ್ನು ಒದಗಿಸಬೇಕು’ ಎಂದು ತಾಕೀತು ಮಾಡಿ ನೀಡಿ ವಿಚಾರಣೆ ಮುಂದೂಡಿದೆ.