ಸುದ್ದಿಗಳು

ರಾಜ್ಯದ ನ್ಯಾಯಾಲಯ ಇತಿಹಾಸ ಕುರಿತು ಗ್ರಂಥ ಹೊರತರಲಿರುವ ಕರ್ನಾಟಕ ಹೈಕೋರ್ಟ್: ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ

Bar & Bench

ʼಕರ್ನಾಟಕ ನ್ಯಾಯಾಲಯ ಇತಿಹಾಸʼ ಗ್ರಂಥ ಪ್ರಕಟಿಸುವ ಹಾದಿಯಲ್ಲಿ ಮೊದಲ ಹೆಜ್ಜೆ ಇರಿಸಿರುವ ಕರ್ನಾಟಕ ಹೈಕೋರ್ಟ್‌ ರಾಜ್ಯದ ಕಾನೂನು, ಶಾಸಕಾಂಗ ಹಾಗೂ ನ್ಯಾಯಾಂಗ ಇತಿಹಾಸದ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಪುಸ್ತಕ ಪ್ರಕಟಿಸುವ ಉದ್ದೇಶಕ್ಕಾಗಿ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಮನವಿ ಪತ್ರದಲ್ಲಿ ತಿಳಿಸಿರುವಂತೆ "ಕರ್ನಾಟಕ ರಾಜ್ಯ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳಲ್ಲಿ ಮಾತ್ರವಲ್ಲದೆ ನ್ಯಾಯಾಂಗ ಆಡಳಿತಕ್ಕೆ ಸಂಬಂಧಿಸಿದಂತೆಯೂ ಶ್ರೀಮಂತ ಪರಂಪರೆ ಹೊಂದಿದೆ. ಈ ಇತಿಹಾಸ ಮತ್ತು ಸಂಪ್ರದಾಯವನ್ನು ದಾಖಲಿಸುವ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಯೋಜಿಸಿ, ಸಮೀಕರಿಸಿ ಮತ್ತು ದೊಡ್ಡ ಪ್ರಮಾಣದಲ್ಲಿ ಜನರಿಗೆ ಪ್ರಸಾರ ಮಾಡಿ, ಆ ಮೂಲಕ ಏಕತೆ ಮತ್ತು ಹೆಮ್ಮೆಯ ಭಾವ ಮೂಡಿಸಬೇಕಿದೆ. ಆದ್ದರಿಂದ ರಾಜ್ಯ ಹೈಕೋರ್ಟ್ ʼಕರ್ನಾಟಕದ ನ್ಯಾಯಾಲಯಗಳ ಇತಿಹಾಸʼ ಎಂಬ ಕೃತಿ ಹೊರ ತರಲು ನಿರ್ಧರಿಸಿದೆ”.

ಕೆಳಗಿನ ಶೀರ್ಷಿಕೆಗಳ ಅಡಿಯಲ್ಲಿ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ.

  • ಐತಿಹಾಸಿಕ ದೃಷ್ಟಿಕೋನದಿಂದ ವಿವಿಧ ಕ್ಷೇತ್ರಗಳಲ್ಲಿನ ವಿಭಿನ್ನ ವಿಷಯಗಳಿಗೆ ಅನ್ವಯವಾಗುವ ಭಿನ್ನ ಕಾನೂನುಗಳ ಜ್ಞಾನ.

  • ರಾಜ್ಯದ ಶಾಸಕಾಂಗ, ಕಾನೂನು ಮತ್ತು ನ್ಯಾಯಾಂಗ ಇತಿಹಾಸದ ದೃಷ್ಟಿಯಿಂದ ಕಾಲಕಾಲಕ್ಕೆ ವಿವಿಧ ಆಡಳಿತಾಂಗಗಳು ಕೈಗೊಂಡ ಕ್ರಮಗಳು.

  • ಕಾಲಕಾಲಕ್ಕೆ ಕಾನೂನಿನಲ್ಲಿ ಬದಲಾವಣೆಗಳನ್ನು ಯಾವಾಗ ಮತ್ತು ಏಕೆ ತರಲಾಯಿತು?

  • ಭಿನ್ನ ಕಾಲಘಟ್ಟಗಳಲ್ಲಿ ವಿಭಿನ್ನ ಕ್ರಮಗಳನ್ನು ಯಾವಾಗ ಮತ್ತು ಏಕೆ ತೆಗೆದುಕೊಳ್ಳಲಾಗಿದೆ?

  • ಸಾಮಾನ್ಯವಾಗಿ ಮತ್ತು ವಿಶೇಷವಾಗಿ ಅಶಾಂತಿಯ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ವಿಭಿನ್ನ ಆಡಳಿತಗಳು ಹೇಗೆ ಪ್ರಯತ್ನಿಸಿದವು?

  • ಕರ್ನಾಟಕ ರಾಜ್ಯದ ಶಾಸಕಾಂಗ, ಕಾನೂನು ಮತ್ತು ನ್ಯಾಯಾಂಗ ಇತಿಹಾಸದ ಚಾರಿತ್ರಿಕ ವ್ಯಕ್ತಿಗಳು ಯಾರು?

  • ಕರ್ನಾಟಕ ರಾಜ್ಯದ ಶಾಸಕಾಂಗ, ಕಾನೂನು ಮತ್ತು ನ್ಯಾಯಾಂಗ ಇತಿಹಾಸಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳು ಯಾವುವು?

ಮೇಲಿನ ಪಟ್ಟಿ ಕೇವಲ ಸೂಚ್ಯ ಮತ್ತು ವಿವರಣಾತ್ಮಕವಾಗಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಸಂಬಂಧಪಟ್ಟ ಮಾಹಿತಿಯನ್ನು ಒಂದು ತಿಂಗಳ ಒಳಗಾಗಿ ಕೆಳಕಂಡ ಇಮೇಲ್‌ ವಿಳಾಸಕ್ಕೆ ಮೇಲ್‌ ಮಾಡಬಹುದು: karcourtsinfo@gmail.com

ಹೈಕೋರ್ಟ್‌ ಬರೆದಿರುವ ಪತ್ರ ಇಲ್ಲಿದೆ:

general_appeal___Karnataka_HC.pdf
Preview