Airport
Airport 
ಸುದ್ದಿಗಳು

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ ಪ್ರಶ್ನಿಸಿದ್ದ ಮನವಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

Bar & Bench

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಶ್ನಿಸಿ ವಿಮಾನ ನಿಲ್ದಾಣಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.

ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ನೀತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದಿದ್ದ ಕೇರಳ ಹೈಕೋರ್ಟ್‌ ನಿರ್ಧಾರವನ್ನು ಆಧರಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಮನವಿಯನ್ನು ವಜಾ ಮಾಡಿತು.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು. ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಮೂರು ವಿಮಾನ ನಿಲ್ದಾಣಗಳನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡುವ ಸಂಬಂಧ 2019ರಲ್ಲಿ ಕೈಗೊಂಡಿದ್ದ ಸಂಪುಟ ಸಭೆಯ ನಿರ್ಧಾರವನ್ನು ವಜಾ ಮಾಡುವಂತೆ ಮನವಿಯಲ್ಲಿ ಕೋರಲಾಗಿತ್ತು.

ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮನವಿಯಲ್ಲಿ ಪ್ರಶ್ನಿಸಲಾಗಿದ್ದು, ಕೇಂದ್ರದ ಕ್ರಮವು ಕಾನೂನುಬಾಹಿರ, ಸ್ವೇಚ್ಛೆಯಿದ ಕೂಡಿದೆ. ಅಲ್ಲದೇ ಇದು ವಿಮಾನ ನಿಲ್ದಾಣ ಪ್ರಾಧಿಕಾರ ಕಾಯಿದೆ 1994ರ ವ್ಯಾಪ್ತಿ ಮೀರಿದ್ದಾಗಿದೆ ಎಂದು ಹೇಳಲಾಗಿದ್ದು, ಸದರಿ ಮನವಿಯನ್ನು ನಿರ್ದಿಷ್ಟವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಸಲ್ಲಿಸಲಾಗಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಾಯಿದೆಯ ಸೆಕ್ಷನ್‌ 12 ಅನ್ನು ಉಲ್ಲೇಖಿಸಿ, ವಿಮಾನ ನಿಲ್ದಾಣ ಆವರಣವನ್ನು ಗುತ್ತಿಗೆ ನೀಡಬಹುದಾಗಿದೆ. ಆದರೆ, ಇಡೀ ನಿಲ್ದಾಣವನ್ನು ಖಾಸಗಿ ವ್ಯಕ್ತಿಗಳ ನಿರ್ವಹಣೆಗೆ ಒಪ್ಪಿಸಲಾಗಿದೆ ಎಂಬುದು ನಮ್ಮ ವಾದ” ಎಂದಿದ್ದರು.

“ರನ್‌ ವೇಗಳು, ಟ್ಯಾಕ್ಸಿ ವೇಗಳು ಮತ್ತು ಏರ್‌ಕ್ರಾಫ್ಟ್‌ ಸಂರಕ್ಷಣಾ ಅಗ್ನಿ ಕಟ್ಟಡಗಳನ್ನೂ ಗುತ್ತಿಗೆಗೆ ನೀಡಲಾಗಿದೆ. ಇವೆಲ್ಲವೂ ಏರ್‌ ಟ್ರಾಫಿಕ್‌ ಸೇವೆಯ ಭಾಗವಾಗಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ಗುತ್ತಿಗೆ ನೀಡುವಂತಿಲ್ಲ… ಇದರರ್ಥ ವಿಮಾನಯಾನ ಸೇವೆಗಳ ನಿಯಂತ್ರಣವನ್ನು ಅವರಿಗೆ ಒಪ್ಪಿಸಿದಂತಾಗುತ್ತದೆ, ಇದು ಎಎಐ ಕಾಯಿದೆಗೆ ವಿರುದ್ಧವಾಗಿದೆ” ಎಂದು ವಾದಿಸಿದ್ದರು.

ಹಾರನಹಳ್ಳಿ ವಾದವನ್ನು ಬಲವಾಗಿ ವಿರೋಧಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್ ಅವರು ಅರ್ಜಿಯ ನಿರ್ವಹಣೆಯನ್ನು ಪ್ರಶ್ನಿಸಿದರು. ಅರ್ಜಿದಾರ ಒಕ್ಕೂಟದ ಕೇರಳ ವಿಭಾಗವು ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಲಾಗಿದೆ. ಹೀಗಾಗಿ, ಈ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂದು ತಕರಾರು ಎತ್ತಿದ್ದರು.

ಇದಕ್ಕೆ ಆಕ್ಷೇಪಿಸಿದ ಹಾರನಹಳ್ಳಿ ಅವರು “ಅದಾನಿ ಸಮೂಹಕ್ಕೆ ತಿರುವನಂತಪುರಂನ ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡುವುದಕ್ಕೆ ಮಾತ್ರ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿ ಸೀಮಿತವಾಗಿತ್ತು. ಆ ಆದೇಶವು ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ ನೀತಿಯನ್ನು ಪ್ರಶ್ನಿಸುವುದನ್ನು ವಿಮುಖಗೊಳಿಸುವುದಿಲ್ಲ” ಎಂದಿದ್ದರು.