ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009 (ಆರ್ಟಿಇ ಕಾಯ್ದೆ) ಅನ್ನು ಉಲ್ಲಂಘಿಸಿ ರಾಜ್ಯ ಸರ್ಕಾರದ ಮಾನ್ಯತೆ ಪಡೆಯುದೆ ಕುರಾನ್ ಆಧಾರಿತ ಧಾರ್ಮಿಕ ಶಿಕ್ಷಣ ನೀಡುತ್ತಿದ್ದ ಖಾಸಗಿ ಶಾಲೆಯೊಂದನ್ನು ಮುಚ್ಚಲು ಕೇರಳ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ.[ಮೊಯಿತುನ್ನಿಕುಟ್ಟಿ ವಿರುದ್ಧ ಜಿಲ್ಲಾಧಿಕಾರಿ ಮತ್ತು ಇತರರು.
ನ್ಯಾಯಮೂರ್ತಿ ಹರಿಶಂಕರ್ ವಿ ಮೆನನ್ ಅವರು ಆರ್ಟಿಇ ಕಾಯ್ದೆಯಡಿಯಲ್ಲಿ ಸರಿಯಾದ ಅನುಮೋದನೆ ಇಲ್ಲದೆ ಶಾಲೆಯನ್ನು ನಡೆಸುವುದು ಕಾನೂನುಬಾಹಿರವಾಗಿದೆ. ಸಂಸ್ಥೆಯು ಇತರ ಸಕ್ಷಮ ಅಧಿಕಾರಿಗಳಿಂದ ಕೆಲವು ಪರವಾನಗಿಗಳು ಅಥವಾ ಮಾನ್ಯತೆಯನ್ನು ಪಡೆದಿದ್ದರೂ ಸಹ ಆರ್ಟಿಇ ಕಾಯಿದೆಯಡಿ ಸೂಕ್ತ ಅನುಮತಿ ಇಲ್ಲದೆ ಅವುಗಳನ್ನು ಅನುಮತಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟಿ, ಹಿದಾಯ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ವರ್ಸಸ್ ಕೇರಳ ರಾಜ್ಯ ಮತ್ತು ಇತರರು ಪ್ರಕರಣದಲ್ಲಿ, ಹೈಕೋರ್ಟ್ ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಧಾರ್ಮಿಕ ಶಿಕ್ಷಣ ನೀಡುವ ಶಾಲೆಗಳ ವಿರುದ್ಧ ಎಚ್ಚರಿಕೆ ನೀಡಿರುವುದನ್ನು ಈ ವೇಳೆ ಪೀಠವು ಗಣನೆಗೆ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ, ನ್ಯಾಯಾಲಯವು ಶಾಲೆಯನ್ನು ಮುಚ್ಚಲು ನಿರ್ದೇಶನಗಳನ್ನು ನೀಡಿತು.
ನ್ಯಾಯಾಲಯವು ತನ್ನ ಆದೇಶದಲ್ಲಿ, "ವಿವರಿಸಲಾಗಿರುವ ಸಂದರ್ಭಗಳ ಅಡಿಯಲ್ಲಿ, (ಆರ್ಟಿಇ) ಕಾಯಿದೆಯ ಸೆಕ್ಷನ್ 18ರ ನಿಬಂಧನೆಗಳ ಅಡಿ ಸೂಕ್ತ ಮಾನ್ಯತೆ ಇಲ್ಲದೆ ಶಿಕ್ಷಣ ಸಂಸ್ಥೆಯನ್ನು ನಡೆಸಲು ಅರ್ಹತೆ ಹೊಂದಿರುವುದಿಲ್ಲ ಎಂದು ನಾನು ಅಭಿಪ್ರಾಯಪಡುತ್ತೇನೆ. ಈ ದೃಷ್ಟಿಯಿಂದ ನಾನು ಅರ್ಜಿಯನ್ನು (ರಾಜ್ಯ ಅನುಮೋದನೆಯಿಲ್ಲದೆ ಶಾಲೆಯ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿರುವ ಅರ್ಜಿ) ಪುರಸ್ಕರಿಸಿದ್ದೇನೆ. ಈ ನ್ಯಾಯಾಲಯದ ತೀರ್ಪನ್ನು ಗಮನಿಸಲು ಶಿಕ್ಷಣ ಸಂಸ್ಥೆಯನ್ನು ಸ್ಥಗಿತಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸುತ್ತೇನೆ" ಎಂದಿತು.
ಇದೇ ವೇಳೆ, ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡುವವರೆಗೆ ಶಾಲೆಯನ್ನು ಪ್ರಸ್ತುತ (2025-2026) ಶೈಕ್ಷಣಿಕ ವರ್ಷದ ಅಂತ್ಯದವರೆಗೆ ನಡೆಸಲು ಅನುಮತಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ರಾಜ್ಯ ಸರ್ಕಾರದಿಂದ ಸಂಸ್ಥೆಗೆ ಮಾನ್ಯತೆ ದೊರೆತಿಲ್ಲ ಎಂಬುದರ ಬಗ್ಗೆ ಯಾವುದೇ ವಿವಾದವಿಲ್ಲ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಆರ್ಟಿಇ ಕಾಯ್ದೆಯ ಸೆಕ್ಷನ್ 18 ಅನ್ನು ಉಲ್ಲೇಖಿಸಿದ ನ್ಯಾಯಾಲಯ, ಇದು ಪ್ರತಿ ಶಾಲೆಯು ಕಾರ್ಯನಿರ್ವಹಿಸುವ ಮೊದಲು ಸೂಕ್ತ ಸರ್ಕಾರಿ ಪ್ರಾಧಿಕಾರದಿಂದ ಮಾನ್ಯತೆ ಪಡೆಯುವುದು ಕಡ್ಡಾಯಗೊಳಿಸುತ್ತದೆ ಎಂದಿತು.
ಶಾಲೆಯು ಸುಮಾರು 300 ವಿದ್ಯಾರ್ಥಿಗಳಿಗೆ ಪೂರ್ವ ಶಾಲಾ ಶಿಕ್ಷಣವನ್ನು ನೀಡುತ್ತಿದೆ, ಮುಖ್ಯವಾಗಿ ಕುರಾನ್ ಮತ್ತು ಸಂಬಂಧಿತ ವಿಷಯಗಳನ್ನು ಕಲಿಸುತ್ತಿದೆ ಎಂದು ತನ್ನ ಪ್ರತಿ-ಅಫಿಡವಿಟ್ನಲ್ಲಿ ಶಿಕ್ಷಣ ಸಂಸ್ಥೆಯು ನೀಡಿದ್ದ ಮಾಹಿತಿಯನ್ನು ಸಹ ಅದು ಗಣನೆಗೆ ತೆಗೆದುಕೊಂಡಿತು.
ಅಂತಿಮವಾಗಿ ಹಿದಾಯ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರಕರಣದಲ್ಲಿ ಮಾನ್ಯತೆ ಅಗತ್ಯವಿರುವ ಶಾಲೆಗಳು ರಾಜ್ಯ ಸರ್ಕಾರದ ಪೂರ್ವಾನುಮತಿಯಿಲ್ಲದೆ ಧಾರ್ಮಿಕ ಬೋಧನೆ ಅಥವಾ ಧಾರ್ಮಿಕ ಅಧ್ಯಯನವನ್ನು ನೀಡುವಂತಿಲ್ಲ ಎಂದು ನ್ಯಾಯಾಲಯವು ಈಗಾಗಲೇ ಹೇಳಿದೆ ಎಂದು ಸ್ಪಷ್ಟಪಡಿಸಿತು.