Kerala HC and a saffron flag
Kerala HC and a saffron flag  
ಸುದ್ದಿಗಳು

ದೇಗುಲಗಳನ್ನು ರಾಜಕೀಯಕ್ಕೆ ಬಳಸುವಂತಿಲ್ಲ: ಕೇಸರಿ ಧ್ವಜ ಕಟ್ಟುವ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್

Bar & Bench

ಕೇರಳದ ಮುತ್ತುಪಿಲಕ್ಕಾಡು ಶ್ರೀ ಪಾರ್ಥಸಾರಥಿ ದೇವಸ್ಥಾನದ ಆವರಣದಲ್ಲಿ ಕೇಸರಿ ಧ್ವಜ ಸ್ಥಾಪನೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಆರ್ ಶ್ರೀನಾಥ್ ಇನ್ನಿತರರು ಮತ್ತು ಕೇರಳ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ಪವಿತ್ರವಾದ ದೇವಾಲಯ ರಾಜಕೀಯ ಧ್ರುವೀಕರಣಕ್ಕಾಗಿ ಬಳಸುವುದಕ್ಕೆ ಮತ್ತು ಕೆಲ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಧ್ವಜಗಳನ್ನು ಹಾರಿಸುವುದಕ್ಕೆ ಅನುಮತಿ ನೀಡಲಾಗದು ಎಂದು ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ  ತಿಳಿಸಿದರು.

"ದೇವಾಲಯಗಳು ಆಧ್ಯಾತ್ಮಿಕ ಸಾಂತ್ವನ ಮತ್ತು ನೆಮ್ಮದಿಯ ದಾರಿದೀಪಗಳಾಗಿವೆ. ಅವುಗಳಿಗೆ ಸಲ್ಲಬೇಕಾದ ಪವಿತ್ರತೆ ಮತ್ತು ಗೌರವ ಬಹಳ ಮಹತ್ವದ್ದಾಗಿದೆ. ಅಂತಹ ಪವಿತ್ರವಾದ ಆಧ್ಯಾತ್ಮಿಕ ನೆಲೆಗಳಿಗೆ ರಾಜಕೀಯ ತಂತ್ರಗಳು ಅಥವಾ ಏಕಸ್ವಾಮ್ಯತ್ವದ ಯತ್ನಗಳಿಂದ ಕುಂದುಂಟಾಗಬಾರದು... ದೇವಾಲಯದಲ್ಲಿ ಕಾಪಾಡಿಕೊಳ್ಳಬೇಕಾದ ಪ್ರಶಾಂತ ಮತ್ತು ಪವಿತ್ರ ವಾತಾವರಣಕ್ಕೆ ವಿರುದ್ಧವಾಗಿ ಅರ್ಜಿದಾರರ ಕಾರ್ಯೋದ್ದೇಶಗಳು ಇರುವುದು ಸ್ಪಷ್ಟವಾಗಿದೆ" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಮುತ್ತುಪಿಲಕ್ಕಾಡು ಶ್ರೀ ಪಾರ್ಥಸಾರಥಿ ದೇವಸ್ಥಾನದ ಭಕ್ತರೆಂದು ಹೇಳಿಕೊಳ್ಳಲಾದ ಇಬ್ಬರು ವ್ಯಕ್ತಿಗಳು ಈ ಅರ್ಜಿ ಸಲ್ಲಿಸಿದ್ದರು.