ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದ ಇನ್ಫ್ಲೂಯೆನ್ಸರ್ ಶರ್ಮಿಷ್ಠಾ ಪನೋಲಿ ಅವರನ್ನು ಕೋಲ್ಕತ್ತಾ ನ್ಯಾಯಾಲಯ ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಗುರುಗ್ರಾಮದಲ್ಲಿ 22 ವರ್ಷದ ಕಾನೂನು ವಿದ್ಯಾರ್ಥಿನಿ ಪನೋಲಿ ಅವರನ್ನು ಮೇ 30ರ ರಾತ್ರಿ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು.
ಆಪರೇಷನ್ ಸಿಂಧೂರ್ ಕುರಿತಾದ ವೀಡಿಯೊದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅವರು ಹೇಳಿಕೆ ನೀಡಿದ್ದಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಪನೋಲಿ ಮತ್ತು ಅವರ ಕುಟುಂಬಕ್ಕೆ ಕಾನೂನು ನೋಟಿಸ್ ಜಾರಿ ಮಾಡಲು ಹಲವು ಪ್ರಯತ್ನಗಳು ನಡೆದವು, ಆದರೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನ್ಯಾಯಾಲಯ ಹೊರಡಿಸಿದ ಬಂಧನ ವಾರಂಟ್ ಆಧಾರದ ಮೇಲೆ ಆಕೆಯನ್ನು ಅಂತಿಮವಾಗಿ ಗುರುಗ್ರಾಮದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಸೇನೆ ನಡೆಸಿದ್ದ ಕಾರ್ಯಾಚರಣೆ ಕುರಿತು ಪಾಕಿಸ್ತಾನದ ಆಕೆಯ ಸಾ. ಮಾಧ್ಯಮ ಖಾತೆ ಫಾಲೋಯರ್ ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಶರ್ಮಿಷ್ಠಾ ಪನೋಲಿ ಅವರು ಮೇ 14ರಂದು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಪ್ರಸಾರ ಮಾಡಿದ್ದರು.
ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿದ್ದ ಪನೋಲಿ ಅವರು ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ ನಟರ ಮೌನವನ್ನು ಪ್ರಶ್ನಿಸಿದ್ದರು. ವಿಡಿಯೋ ಅನತಿ ಕಾಲದಲ್ಲಿಯೇ ವೈರಲ್ ಆಗಿ, ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ವೀಡಿಯೊ ಪ್ರಸಾರದ ಬಳಿಕ ತನನ್ನು ಕೊಲೆ ಮಾಡುವುದಾಗಿ ಅತ್ಯಾಚಾರ ಎಸಗುವುದಾಗಿ ಬೆದರಿಕೆಗಳು ಬಂದಿವೆ ಎಂದು ಪನೋಲಿ ಹೇಳಿದ್ದರು. ಮೇ 15ರಂದು ವೀಡಿಯೊ ತೆಗೆದುಹಾಕಿದ್ದ ಆಕೆ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಕ್ಷಮೆ ಯಾಚಿಸಿದ್ದರು.