KSPCB and Karnataka HC
KSPCB and Karnataka HC 
ಸುದ್ದಿಗಳು

ಕೆಎಸ್‌ಪಿಸಿಬಿ ಅಧ್ಯಕ್ಷರ ಅಧಿಕಾರಾವಧಿ ಮೊಟಕು ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Bar & Bench

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಅವರ ಅಧಿಕಾರವಧಿಯನ್ನು ಮೊಟಕುಗೊಳಿಸಿ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿರುವ ಮನವಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ಅಧ್ಯಕ್ಷರ ನೇಮಕ ಸಂಬಂಧ ಮಾರ್ಗ ಸೂಚಿ ರಚನೆ ಮಾಡುವ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷರ ಅಧಿಕಾರವಧಿ ಮೊಟಕುಗೊಳಿಸಿ ರಾಜ್ಯ ಸರ್ಕಾರ 2023ರ ಆಗಸ್ಟ್ 31ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಾಂತ್.ಎ. ತಿಮ್ಮಯ್ಯ, ಮಂಡಳಿಗೆ ಅಧ್ಯಕ್ಷರ ನೇಮಕ ಕುರಿತು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರ ಪ್ರತಿನಿಧಿಸಿರುವ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು 2024ಕ್ಕೆ ಶಾಂತ್ ತಿಮ್ಮಯ್ಯ ಅವಧಿ ಮುಕ್ತಾಯವಾಗಬೇಕಿತ್ತು. ಇದನ್ನು 2022ಕ್ಕೆ ಸೀಮಿತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಹೈಕೋರ್ಟ್ ಹಿಂದೆ ಮಾರ್ಗಸೂಚಿ ಸರಿಯಿರಲಿಲ್ಲ ಎಂದು ಆದೇಶ ಮಾಡಿತ್ತು. ಮಾರ್ಗಸೂಚಿಯನ್ನು ಪುನರ್ ರಚಿಸಿ, ನಿಯಮ ರೂಪಿಸಲಾಗಿದೆ. ಇದರ ಅನ್ವಯ ತಿದ್ದುಪಡಿ ಆದೇಶ ಮಾಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು ಶಾಂತ್ ತಿಮ್ಮಯ್ಯ ಅವರ ನೇಮಕಾತಿಯಲ್ಲಿ ನಿಯಮ ಪಾಲಿಸಲಾಗಿದೆ. ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ. ಈ ನಿಟ್ಟಿನಲ್ಲಿ ಅಧಿಕಾರ ಮೊಟಕುಗೊಳಿಸಿ ಹೊರಡಿಸಿರುವ ಆದೇಶ ರದ್ದುಮಾಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಸರ್ಕಾರದ ತಿದ್ದುಪಡಿ ಆದೇಶದಲ್ಲಿ ಏನಿತ್ತು?

ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ 5.3.2019ರಂದು ಜಯರಾಂ ಎಂಬವರನ್ನು 4.3.2022ರವರೆಗೆ ನೇಮಕ ಮಾಡಲಾಗಿತ್ತು. ಜಯರಾಂ ಅವರು 20.6.2019ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷರ ಹುದ್ದೆಗೆ ಉಸ್ತುವಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಆನಂತರ ನೇಮಕಗೊಂಡವರು ಮೂರರಿಂದ ಆರು ತಿಂಗಳವರೆಗೆ ಹುದ್ದೆಯಲ್ಲಿದ್ದರು. 15.11.2021ರಂದು ಶಾಂತ್ ತಿಮ್ಮಯ್ಯ ಅವರನ್ನು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರ ಅವಧಿಯು 4.3.2022ಕ್ಕೆ ಬದಲಾಗಿ 14.11.2024ಕ್ಕೆ ಮುಗಿಯುತ್ತದೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಈ ಪ್ರಮಾದವನ್ನು ಸರಿಪಡಿಸಲಾಗಿದ್ದು, ಶಾಂತ್ ತಿಮ್ಮಯ್ಯ ಅವರ ಅಧ್ಯಕ್ಷ ಅವಧಿಯು 4.3.2022ಕ್ಕೆ ಅಂತ್ಯವಾಗಿದೆ ಎಂದು ತಿದ್ದುಪಡಿಯಲ್ಲಿ ವಿವರಿಸಲಾಗಿತ್ತು.