Ashish Mishra, Lakhimpur Kheri
Ashish Mishra, Lakhimpur Kheri 
ಸುದ್ದಿಗಳು

ಲಖೀಂಪುರ ಖೇರಿ ಪ್ರಕರಣ: ಕೇಂದ್ರ ಸಚಿವರ ಪುತ್ರ ಆಶೀಶ್‌ ಮಿಶ್ರಾಗೆ ಜಾಮೀನು ನಿರಾಕರಿಸಿದ ಉತ್ತರ ಪ್ರದೇಶ ನ್ಯಾಯಾಲಯ

Bar & Bench

ಉತ್ತರ ಪ್ರದೇಶದ ಲಖೀಂಪುರ್‌ ಖೇರಿಯಲ್ಲಿ ಪ್ರತಿಭಟನಾ ನಿರತರಾಗಿದ್ದ ರೈತರ ಮೇಲೆ ವಾಹನ ಚಲಾಯಿಸಿ 8 ಮಂದಿಯ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿರುವ ಕೇಂದ್ರ ರಾಜ್ಯ ಖಾತೆ ಸಚಿವ ಅಜಯ್‌ ಮಿಶ್ರಾ ತೇನಿ ಅವರ ಪುತ್ರ ಆಶಿಶ್‌ ಮಿಶ್ರಾಗೆ ಉತ್ತರ ಪ್ರದೇಶದ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಜುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಚಿಂತಾ ರಾಮ್ ಅವರು ಪ್ರಕರಣದ ಸಂಬಂದ ಜಾಮೀನು ನಿರಾಕರಣೆಯ ಆದೇಶವನ್ನು ಮಂಗಳವಾರ ನೀಡಿದರು. ಮಿಶ್ರಾ ಅವರನ್ನು ಅಕ್ಟೋಬರ್‌ 9ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿತ್ತು. 12 ತಾಸಿನ ವಿಚಾರಣೆಯ ನಂತರ ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು.

ಇದಲ್ಲದೆ ಪ್ರಕರಣದ ಸಂಬಂಧ ಇನ್ನೂ ಇಬ್ಬರನ್ನು ಉತ್ತರಪ್ರದೇಶ ಪೊಲೀಸರು ಇಂದು ವಶಕ್ಕೆ ಪಡೆದಿದ್ದು ಪ್ರಕರಣದಲ್ಲಿ ಈವರೆಗೆ ವಶಕ್ಕೆ ಪಡೆದಿರುವ ಆರೋಪಿಗಳ ಸಂಖ್ಯೆ 6ಕ್ಕೆ ಏರಿದೆ.

ಘಟನೆಯ ಸಂಬಂಧ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಸಹ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿದೆ. ಸಿಜೆಐ ಎನ್‌ ವಿ ರಮಣ ಅವರಿಗೆ ಇಬ್ಬರು ವಕೀಲರು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಪತ್ರವನ್ನು ಬರೆದಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಪ್ರಕರಣ ದಾಖಲಿಸಿತ್ತು.