ಸುದ್ದಿಗಳು

ಹಾಪುರ್ ಲಾಠಿ ಪ್ರಹಾರ: ವಕೀಲರ ಪರಿಷತ್ ಅಹವಾಲು ಆಲಿಸಲು ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿದ ಅಲಾಹಾಬಾದ್ ಹೈಕೋರ್ಟ್

Bar & Bench

ಉತ್ತರ ಪ್ರದೇಶದ ಹಾಪುರ್‌ನಲ್ಲಿ ಇತ್ತೀಚೆಗೆ ನಡೆದ ನ್ಯಾಯವಾದಿಗಳ ಮೇಲಿನ ಲಾಠಿ ಪ್ರಹಾರ ಘಟನೆಗೆ ಸಂಬಂಧಿಸಿದಂತೆ ವಕೀಲರ ಪರಿಷತ್ತಿನ ಅಹವಾಲು ಆಲಿಸಲು ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯವರ ನೇತೃತ್ವದ ಸಮಿತಿ ರಚಿಸಿದೆ.

ಘಟನೆ ಕುರಿತಂತೆ ಉತ್ತರಪ್ರದೇಶ ವಕೀಲರ ಪರಿಷತ್‌ ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ನಡೆದ ವಿಶೇಷ ಕಲಾಪದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್‌ ದಿವಾಕರ್ ಮತ್ತು ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರನ್ನೊಳಗೊಂಡ ಪೀಠ ಸಮಿತಿಗೆ ಉಲ್ಲೇಖಿಸಿತು.

ಅಲಾಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಮನೋಜ್‌ ಕುಮಾರ್‌ ಗುಪ್ತಾ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಮೊಹಮ್ಮದ್. ಫೈಜ್ ಆಲಂ ಖಾನ್, ಉತ್ತರ ಪ್ರದೇಶದ ಅಡ್ವೊಕೇಟ್ ಜನರಲ್ ಅಥವಾ ಅವರು ಹೆಸರಿಸುವವರು, ಉತ್ತರಪ್ರದೇಶ ವಕೀಲರ ಪರಿಷತ್ತಿನ ಅಧ್ಯಕ್ಷರು, ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.

ಘಟನೆಯ ಕುರಿತು ವಕೀಲರು ದಾಖಲಿಸಿರುವ ಎಫ್‌ಐಆರ್‌ ಆಧರಿಸಿ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ರಾಜ್ಯ ಸರ್ಕಾರದಿಂದ ಈಗಾಗಲೇ ರಚನೆಯಾಗಿರುವ ಎಸ್‌ಐಟಿಗೆ ನ್ಯಾಯಾಲಯ ಸೂಚಿಸಿದೆ.

ವಕೀಲೆ ಪ್ರಿಯಾಂಕಾ ತ್ಯಾಗಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಕ್ಕಾಗಿ ನ್ಯಾಯವಾದಿ ಸಮುದಾಯ ಕಳೆದ ತಿಂಗಳು ಪ್ರತಿಭಟನೆ ನಡಸಿತ್ತು. ಆ ವೇಳೆ ವಕೀಲರ ಮೇಲೆ ಪೊಲೀಸರು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಪರಿಷತ್ತು ಸೆಪ್ಟೆಂಬರ್ 4, 5 ಹಾಗೂ 6ರಂದು ಮೂರು ದಿನಗಳ ಕಾಲ ನ್ಯಾಯಾಂಗ ಕಾರ್ಯಗಖಿಂದ ದೂರ ಉಳಿದಿತ್ತು ಮುಷ್ಕರದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸ್ವಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

In_Re_v_Bar_Council_Of_UP.pdf
Preview