Karnataka High Court
Karnataka High Court  
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕೆ ವಿ ಅರವಿಂದ್ ನೇಮಕಗೊಳಿಸಿದ ಕೇಂದ್ರ ಸರ್ಕಾರ

Bar & Bench

ವಕೀಲ ಕೆ ವಿ ಅರವಿಂದ್‌ ಅವರನ್ನು ಎರಡು ವರ್ಷಗಳ ಅವಧಿಗೆ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರವು ಬುಧವಾರ ಅಧಿಸೂಚನೆ ಹೊರಡಿಸಿದೆ.

ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್‌ ಅವರನ್ನು ಸಂವಿಧಾನದ 224ನೇ ವಿಧಿ ಕ್ಲಾಸ್‌ (1) ರ ಅಡಿ ದೊರೆತಿರುವ ಅಧಿಕಾರ ಬಳಸಿ ರಾಷ್ಟ್ರಪತಿ ಅವರು ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಿದ್ದಾರೆ.

2023ರ ಜುಲೈ 18ರಂದು ಅರವಿಂದ್‌ ಅವರನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

ಅರವಿಂದ್‌ ಅವರು 23 ವರ್ಷಗಳಿಂದ ವಕೀಲರಾಗಿದ್ದಾರೆ ಎಂದು ಕೊಲಿಜಿಯಂ ವಿವರಿಸಿದ್ದು, 567 ವರದಿಯಾಗಿರುವ ತೀರ್ಪುಗಳಲ್ಲಿ ವಾದಿಸಿದ್ದಾರೆ ಎಂದು ಕೊಲಿಜಿಯಂ ಹೇಳಿತ್ತು. ಪ್ರಸಕ್ತ ವರ್ಷದ ಜನವರಿಯಲ್ಲಿ ಅರವಿಂದ್‌ ಅವರ ವಿಚಾರದಲ್ಲಿ ನಿರ್ಣಯವನ್ನು ಕೈಗೊಳ್ಳುವುದನ್ನು ಮುಂದೂಡಲಾಗಿತ್ತು. ಅರವಿಂದ್‌ ಅವರು ಹುದ್ದೆಗೆ ಸೂಕ್ತ ಹಾಗೂ ಸಮರ್ಥರಾಗಿದ್ದಾರೆ ಎಂದು ಕೊಲಿಜಿಯಂ ಹೇಳಿತ್ತು.

ತೆರಿಗೆ ವಿಚಾರದಲ್ಲಿ ವಕೀಲ ಅರವಿಂದ್‌ ಅವರ ಅನುಭವನ್ನು ನಿರ್ಣಯದಲ್ಲಿ ಒತ್ತಿ ಹೇಳಲಾಗಿದ್ದು, ಕರ್ನಾಟಕ ಹೈಕೋರ್ಟ್‌ಗೆ ನಿರ್ದಿಷ್ಟ ಕ್ಷೇತ್ರದಲ್ಲಿ ತಜ್ಞತೆ ಇರುವವರ ಅಗತ್ಯವಿದೆ ಎಂದಿದೆ. “ಕರ್ನಾಟಕ ಹೈಕೋರ್ಟ್‌ನಲ್ಲಿ ತೆರಿಗೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಈ ನಿಟ್ಟಿನಲ್ಲಿ ತಜ್ಞತೆ ಇರುವ ನ್ಯಾಯಮೂರ್ತಿಗಳ ಅಗತ್ಯವಿದೆ. ವಾಣಿಜ್ಯ, ಕಾರ್ಪೊರೇಟ್‌ ಮತ್ತು ವೈಯಕ್ತಿಕ ಕಾನೂನು ಸೇರಿದಂತೆ ಇತರೆ ಕಾನೂನು ಕ್ಷೇತ್ರಗಳ ಜೊತೆ ತೆರಿಗೆ ಕಾನೂನು ಅವಿಭಾಜ್ಯ ಸಂಬಂಧ ಹೊಂದಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರ ಪದೋನ್ನತಿಯ ವಿಚಾರದ ಪ್ರಸ್ತಾವವನ್ನು ಪರಿಗಣಿಸಿ ಕೆ ವಿ ಅರವಿಂದ್‌ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಸೂಕ್ತ ಹಾಗೂ ಸಮರ್ಥರಾಗಿದ್ದಾರೆ ಎನ್ನುವುದು ಕೊಲಿಜಿಯಂನ ವಿವೇಚನಾಯುಕ್ತ ಅಭಿಪ್ರಾಯವಾಗಿದೆ” ಎಂದು ಈ ಕುರಿತಾದ ನಿರ್ಣಯದಲ್ಲಿ ಕೊಲಿಜಿಯಂ ಹೇಳಿದ್ದನ್ನು ಇಲ್ಲಿ ನೆನೆಯಬಹುದು.

Notification.pdf
Preview