ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |24-4-2021

Bar & Bench

ಆರೋಪಿಗಳ ಪರ ವಾದಿಸಿದಂತೆ ಆದೇಶಿಸಿದ್ದ ವಕೀಲರ ಸಂಘದ ವಿರುದ್ಧ ಕ್ರಮಕ್ಕೆ ಕೆಎಸ್‌ಬಿಸಿಗೆ ಹೈಕೋರ್ಟ್‌ ಆದೇಶ

ನಿರ್ದಿಷ್ಟ ಆರೋಪಿಗಳನ್ನು ಸಮರ್ಥಿಸಿಕೊಳ್ಳುವುದನ್ನು ತಡೆಯುವ ಸಂಬಂಧ ನಿಲುವಳಿ ಪಾಸು ಮಾಡಿರುವ ವಕೀಲರ ಸಂಘದ ವಿರುದ್ಧ ತುರ್ತು ಕ್ರಮಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

KSBC

ಪೊಲೀಸರು, ಶಂಕಿತ ಭಯೋತ್ಪಾದಕರು, ಅತ್ಯಾಚಾರ ಆರೋಪಿಗಳು, ಗುಂಪು ಹತ್ಯೆಕೋರರು ಇತ್ಯಾದಿ ಅಪರಾಧಗಳನ್ನು ಎಸಗಿದವರ ಪರ ವಾದಿಸದಂತೆ ನಿಲುವಳಿ ಪಾಸು ಮಾಡುವುದು ಸಂವಿಧಾನ ವಿರೋಧಿ ನಡೆ ಮತ್ತು ವೃತ್ತಿಪರತೆ ವಿರೋಧಿ ನಡೆಯಾಗಿದೆ ಎಂದು ಎ ಎಸ್‌ ಮೊಹಮ್ಮದ್‌ ರಫಿ ವರ್ಸಸ್‌ ತಮಿಳುನಾಡು ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ. “ಇದು ಎಲ್ಲಾ ವಕೀಲರ ಸಂಘ ಮತ್ತು ಸದಸ್ಯರನ್ನು ಒಳಗೊಂಡಿರುವ ಕಾನೂನಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಬಿಸಿಗೆ ಕಾನೂನಿನ ಸ್ಥಾನಮಾನದ ಬಗ್ಗೆ ತಿಳಿಸಲಾಗಿದ್ದು, ಅದು ತಕ್ಷಣ ತುರ್ತಾಗಿ ಕ್ರಮವಹಿಸಬೇಕಿದೆ” ಎಂದು ಪೀಠ ಹೇಳಿದೆ.

“ಸಮಾಜಕ್ಕೆ ದೊಡ್ಡ ಹಾನಿ:” ಮಾಸ್ಕ್‌ ಧರಿಸದೇ ಕ್ರಿಕೆಟ್‌ ಆಡುತ್ತಿದ್ದ 20 ವರ್ಷದ ಯುವಕನಿಗೆ ಜಾಮೀನು ನಿರಾಕರಣೆ ಸಮರ್ಥಿಸಿದ ಮುಂಬೈ ನ್ಯಾಯಾಲಯ

ಮಾಸ್ಕ್‌ ಧರಿಸದೇ ಕರ್ಫ್ಯೂ ನಿರ್ಬಂಧಗಳನ್ನು ಉಲ್ಲಂಘಿಸಿ ಇತರೆ ಆರು ಯುವಕರ ಜೊತೆ ಕ್ರಿಕೆಟ್‌ ಆಡುತ್ತಿದ್ದ 20 ವರ್ಷದ ಯುವಕನಿಗೆ ಈಚೆಗೆ ಮುಂಬೈ ಸೆಷನ್ಸ್‌ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

cricket and Mumbai sessions court

ಕೋವಿಡ್‌ ಸಾಂಕ್ರಾಮಿಕತೆ ತಡೆಯಲು ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಮುರಿಯುವ ಮೂಲಕ ನಿಯಮ ಉಲ್ಲಂಘನೆ ಮಾಡಿರುವ ಆರೋಪಿ ನವೀದ್‌ ಖುರೇಷಿಯನ್ನು ಬಿಡುಗಡೆ ಮಾಡುವುದರಿಂದ ಇತರೆ ಜನರಿಗೆ ದೊಡ್ಡ ಹಾನಿಯಾಗಲಿದೆ ಎಂದಿದ್ದು, ಆರೋಪಿ ಹಾಗೂ ಇತರೆ ಆರು ಮಂದಿ ಯುವಕರು ಕಾನೂನು ಮುರಿದಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅಭಿಜಿತ್‌ ನಂದಗಾವ್ಕಂರ್‌ ಹೇಳಿದ್ದಾರೆ.