ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |23-4-2021

Bar & Bench

ಕೈಕೋಳ ಹಾಕಿ ಉಮರ್‌ ಖಾಲಿದ್‌, ಖಾಲಿದ್‌ ಸಫಿರನ್ನು ಪ್ರಸ್ತುತಪಡಿಸುವುದರ ಹಿಂದಿನ ಕಾರಣವೇನು? ದೆಹಲಿ ಪೊಲೀಸರಿಗೆ ನ್ಯಾಯಾಲಯ ಪ್ರಶ್ನೆ

ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಉಮರ್‌ ಖಾಲಿದ್‌ ಮತ್ತು ಖಾಲಿದ್‌ ಸಫಿ ಅವರ ಕೈಗಳಿಗೆ ಹಿಂದಿನಿಂದ ಕೈಕೋಳ ಹಾಕಿ ಪ್ರಸ್ತುತಪಡಿಸಲು ಕೋರಿರುವ ದೆಹಲಿ ಪೊಲೀಸರ ಮನವಿಗೆ ಕಾರಣ ನೀಡುವಂತೆ ದೆಹಲಿ ನ್ಯಾಯಾಲಯ ಪ್ರಶ್ನಿಸಿದ್ದು, ಇಂಥದ್ದಕ್ಕಾಗಿ ಮನವಿ ಸಲ್ಲಿಸಿರುವುದರ ಹಿಂದೆ ಯಾವುದೇ ಸಕಾರಣವಿಲ್ಲ ಎಂದಿದೆ.

Umar Khalid, Khalid Saifi

ಸದರಿ ಮನವಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಜೈಲಿನ ಮೇಲ್ವಿಚಾರಕರಿಗೆ ಕರಕರಡೋಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವಿನೋದ್‌ ಯಾದವ್‌ ಸೂಚಿಸಿದ್ದಾರೆ. ಕರಕರಡೋಮ ಜಿಲ್ಲಾ ನ್ಯಾಯಾಲಯಗಳ ಲಾಕ್‌ಅಪ್‌ ಉಸ್ತುವಾರಿಯಿಂದ ಮನವಿ ಸಲ್ಲಿಕೆಯಾಗಿದ್ದು, ಉಮರ್‌ ಖಾಲಿದ್, ಸೈಫಿ‌ ಹೆಚ್ಚಿನ ಅಪಾಯದ ಕೈದಿಗಳಾಗಿರುವುದರಿಂದ ಅವರ ಕೈಗಳಿಗೆ ಹಿಂದಿನಿಂದ ಕೋಳ ತೊಡಿಸಬೇಕು ಎಂದು ಮನವಿ ಮಾಡಲಾಗಿತ್ತು

ಅಯೋಧ್ಯಾ ವಿವಾದ ಮಧ್ಯಸ್ಥಿಕೆ ಸಮಿತಿಯಲ್ಲಿ ಶಾರುಖ್‌ ಖಾನ್‌ ಉಪಸ್ಥಿತಿ ಬಯಸಿದ್ದ ಸಿಜೆಐ ಬೊಬ್ಡೆ

ಅಯೋಧ್ಯಾ ವಿವಾದವನ್ನು ಬಗೆಹರಿಸುವ ಸಂಬಂಧ 2019ರಲ್ಲಿ ಸುಪ್ರೀಂ ಕೋರ್ಟ್‌ ರಚಿಸಿದ್ದ ಮಧ್ಯಸ್ಥಿಕೆ ಸಮಿತಿಯಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರನ್ನು ಒಳಗೊಳ್ಳಲು ನಿವೃತ್ತಿ ಹೊಂದುತ್ತಿರುವ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಬಯಸಿದ್ದರು ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು ಸಿಜೆಐ ಬೊಬ್ಡೆ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬಹಿರಂಗಗೊಳಿಸಿದರು.

Shah Rukh Khan and CJI S A Bobde

“ಅಯೋಧ್ಯಾ ವಿಚಾರಣೆಯ ಆರಂಭಿಕ ಹಂತದಲ್ಲಿ ಸಮಸ್ಯೆಯನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಬಹುದು ಎಂಬ ಖಚಿತ ವಿಶ್ವಾಸವನ್ನು ಬೊಬ್ಡೆ ಅವರು ಹೊಂದಿದ್ದರು. ಶಾರುಖ್‌ ಖಾನ್‌ ಸಮಿತಿಯ ಭಾಗವಾಗಬಹುದೇ ಎಂದು ನನ್ನ ಪ್ರಶ್ನಿಸಿದ್ದರು. ಶಾರುಖ್‌ ಕೇಳಿದ ಬಳಿಕ ನಾನು ಅವರು ತುಂಬಾ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದೆ. ದುರದೃಷ್ಟವಶಾತ್‌ ಮಧ್ಯಸ್ಥಿಕೆ ಫಲಪ್ರದವಾಗಲಿಲ್ಲ” ಎಂದು ಸಿಂಗ್‌ ಹೇಳಿದರು. ರಾಮ ಮಂದಿರ-ಬಾಬರಿ ಮಸೀದಿ ವಿವಾದ ಕುರಿತ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ನಿವೃತ್ತ ಸಿಜೆಐ ರಂಜನ್‌ ಗೊಗೊಯ್‌ ಅವರಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ಬೊಬ್ಡೆ ಸಹ ಇದ್ದರು.