ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 04-12-2020

Bar & Bench

ಭಾರತೀಯ ಸಂವಿಧಾನದ ತಿದ್ದುಪಡಿ ಸುಲಭ, ಅದುವೇ ಅದರ ದುರ್ಬಲ ಅಂಶ: ನ್ಯಾಯಮೂರ್ತಿ ದಾಮಾ ಶೇಷಾದ್ರಿ ನಾಯ್ಡು

ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ಮಾಡುವುದು ಸುಲಭ. ಅದುವೇ ಅದರ ದೊಡ್ಡ ದೌರ್ಬಲ್ಯ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ದಾಮಾ ಶೇಷಾದ್ರಿ ನಾಯ್ಡು ಪ್ರತಿಪಾದಿಸಿದರು.

Justice Dama Seshadri Naidu

ನೀತಿ ನಿರೂಪಣಾ ಚಿಂತಕರ ಚಾವಡಿಯಾದ ವಿಧಿ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿ ಆಯೋಜಿಸಿದ್ದ ನಾಲ್ಕನೇ ವಾರ್ಷಿಕ ಉಪನ್ಯಾಸ ಕಾರ್ಯಕ್ರಮ “ಸಾರ್ವಜನಿಕ ಬದುಕಿನಲ್ಲಿ ಸಾಂವಿಧಾನಿಕ ಸಂಸ್ಕೃತಿ” ಎಂಬ ವಿಚಾರದ ಕುರಿತು ಅವರು ಉಪನ್ಯಾಸ ನೀಡಿದರು. “ಸಂವಿಧಾನವನ್ನು ತಿದ್ದುಪಡಿ ಮಾಡುವುದು ನಮ್ಮ ದುರ್ಬಲ ಅಂಶ. ಮೂಲ (ಸಬ್‌ಸ್ಟ್ಯಾನ್ಟಿವ್) ಕಾನೂನಿನ ವಿಷಯಕ್ಕೆ ಬಂದರೆ, ಅದು ತಿದ್ದುಪಡಿಯಿಂದ ಹೆಚ್ಚು ನಿರೋಧತೆ ಹೊಂದಿರಬೇಕು, ಕಾರ್ಯವಿಧಾನದ (ಪ್ರೊಸೀಜರಲ್) ವಿಷಯದಲ್ಲಿ ಹೆಚ್ಚು ಉದಾರವಾಗಿರಬೇಕು. 368ನೇ ವಿಧಿಗೆ ಸಂಬಂಧಿಸಿದಂತೆ ಮೂಲ ಅಂಶಗಳ (ಸಂವಿಧಾನದ) ಹೊರತಾಗಿಯೂ, ಪ್ರಮುಖ ಅಂಶಗಳ ತಿದ್ದುಪಡಿ ಮಾಡಲು ಕಠಿಣ ಆಯ್ಕೆಗಳ ಲಭ್ಯತೆಯನ್ನು ಬಯಸುತ್ತೇನೆ” ಎಂದು ನ್ಯಾ. ನಾಯ್ಢು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ, ಪತ್ರಿಕೆಗಳಲ್ಲಿ ವರದಿಯಾಗುವ ಅಪರಾಧಗಳ ಕುರಿತು ಸ್ವಯಂಪ್ರೇರಿತ ಕ್ರಮಕ್ಕೆ ಪೊಲೀಸ್‌ ಘಟಕ ಸ್ಥಾಪನೆಗೆ ಮದ್ರಾಸ್‌ ಹೈಕೋರ್ಟ್‌ ಒಲವು

ಸಾಮಾಜಿಕ ಮಾಧ್ಯಮ, ಪತ್ರಿಕೆಗಳು/ಟಿವಿಗಳಲ್ಲಿ ವರದಿಯಾಗಿರುವ ಅಪರಾಧಗಳ ಕುರಿತು ಔಪಚಾರಿಕ ದೂರಿಗೆ ಕಾಯದೇ ಸ್ವಯಂ ಪ್ರೇರಿತ ಕ್ರಮಕೈಗೊಳ್ಳುವ ದೃಷ್ಟಿಯಿಂದ ಕಾನೂನು ಜಾರಿ ಸಂಸ್ಥೆಗಳು ಪ್ರತ್ಯೇಕ ಘಟಕ ಸ್ಥಾಪಿಸಬೇಕೆ ಎಂಬುದನ್ನು ನಿರ್ಧರಿಸುವ ಸಂಬಂಧ ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

N Kirubakaran and B Pugalendhi

ತೆಂಕಸಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಮಹಿಳೆಯ ಜೊತೆಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಈ ಕುರಿತಾದ ವರದಿ ʼದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ಪತ್ತಿಕೆಯಲ್ಲಿ ವರದಿಯಾಗಿತ್ತು. ಇದನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಮತ್ತು ಬಿ ಪುಗಳೇಂದಿ ಅವರಿದ್ದ ವಿಭಾಗೀಯ ಪೀಠವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ವಿಚಾರಣೆಗೆ ಕೈಗೊಂಡಿತ್ತು. “ನರಿಕುರವ ಮಹಿಳೆಯನ್ನು ಲೈಂಗಿಕತೆಗೆ ಸಹಕರಿಸುವಂತೆ ಒತ್ತಾಯಿಸಿದ ತಮಿಳುನಾಡು ಪೊಲೀಸ್‌ ವಿಡಿಯೊ ವೈರಲ್‌ ಆಗಿರುವುದರ ಹೊರತಾಗಿಯೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿಲ್ಲ” ಎಂಬ ತಲೆಬರಹದಡಿ ಪ್ರಕಟವಾದ ವರದಿಯನ್ನು ಆಧರಿಸಿ ಪೀಠವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. “ಪೊಲೀಸರು ಹೀಗೆ ವರ್ತಿಸಿದರೆ ನಮ್ಮ ದೇಶದಲ್ಲಿ ಯಾವೊಬ್ಬ ಮಹಿಳೆಯೂ ಸುರಕ್ಷಿತವಲ್ಲ! ಸಾಮಾಜಿಕ ಮಾಧ್ಯಮ ಸರಿಯಾಗಿದ್ದು, ಅದನ್ನು ದೂರು ಎಂದು ಪರಿಗಣಿಸಬೇಕು. ಅದಕ್ಕಾಗಿ ದೂರು ದಾಖಲಿಸುವುದನ್ನು ಕಾಯಲಾಗದು” ಎಂದು ನ್ಯಾಯಮೂರ್ತಿ ಎನ್‌ ಕಿರುಬಾಕರನ್‌ ಹೇಳಿದ್ದಾರೆ.

ಬ್ಯಾಗ್‌, ತದ್ರೂಪಿ ಹಾರ್ಡ್‌ ಡಿಸ್ಕ್‌ಗಾಗಿ ಎನ್‌ಐಎ ನ್ಯಾಯಾಲಯದಲ್ಲಿ ಹೊಸ ಮನವಿ ಸಲ್ಲಿಸಿದ ಫಾದರ್‌ ಸ್ಟ್ಯಾನ್‌ ಸ್ವಾಮಿ

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿ, ಸದ್ಯ ಜೈಲು ಆಸ್ಪತ್ರೆಯಲ್ಲಿರುವ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರು ಎನ್‌ಐಎ ವಶದಲ್ಲಿದೆ ಎನ್ನಲಾದ ತಮ್ಮ ಬ್ಯಾಗ್‌ ಮತ್ತು ತದ್ರೂಪಿ ಹಾರ್ಡ್‌ ಡಿಸ್ಕ್‌ ಮರಳಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Father Stan Swamy

ನ್ಯಾಯಾಲಯದ ಆದೇಶವಿಲ್ಲದೇ ಸದ್ಯ ತನ್ನನ್ನು ಇರಿಸಲಾಗಿರುವ ತಲೋಜಾ ಜೈಲಿನಿಂದ ಬೇರೊಂದು ಜೈಲಿಗೆ ವರ್ಗಾಯಿಸುವ ಸಾಧ್ಯತೆ ಇದ್ದು, ಹಾಗೆ ಮಾಡದಂತೆ ನಿರ್ದೇಶಿಸುವಂತೆ ಮನವಿಯಲ್ಲಿ ಕೋರಿದ್ದಾರೆ. ತಮ್ಮನ್ನು ಬೇರೊಂದು ಜೈಲಿಗೆ ವರ್ಗಾಯಿಸುವ ಸಾಧ್ಯತೆಯ ಬಗ್ಗೆ ಜೈಲು ಅಧಿಕಾರಿಗಳಿಂದ ತಿಳಿದು ಸ್ವಾಮಿ ಅವರು ಮನವಿ ಸಲ್ಲಿಸಿದ್ದಾರೆ ಎಂದು ಅವರ ಪರ ವಕೀಲ ಶರೀಫ್‌ ಶೇಖ್‌ ಹೇಳಿದ್ದಾರೆ.

ವಿಶೇಷ ಚೇತನ ಪರೀಕ್ಷಾ ಆಕಾಂಕ್ಷಿಗಳನ್ನು ಒಳಗೊಳ್ಳದಿರುವ ಮೂಲಕ ಸಿಎಲ್‌ಎಟಿ ಪ್ರಮಾದ ಎಸಗಿದೆ: ನ್ಯಾ. ಡಿ ವೈ ಚಂದ್ರಚೂಡ್‌

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯೂ (ಸಿಎಲ್‌ಎಟಿ) ಸೇರಿದಂತೆ ಭಾರತದಲ್ಲಿನ ಕಾನೂನು ಪ್ರವೇಶ ಪರೀಕ್ಷೆಗಳು ವೈಕಲ್ಯಕ್ಕೆ ತುತ್ತಾದ ವಿಶೇಷ ಚೇತನ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುವ ಮೂಲಕ ಅವರನ್ನು ಕಾನೂನು ವೃತ್ತಿಯಿಂದ ಹೊರಗಿಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದರು.

Justice DY Chandrachud

“ಅಂಗವಿಕಲರಾಗಿರುವ ಕಾನೂನು ವೃತ್ತಿಪರರು” ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶದ ಬೀಳ್ಕೊಡುಗೆ ಸಮಾವೇಶದಲ್ಲಿ ಅವರು ಮಾತನಾಡಿದರು. “ಕಾನೂನು ವೃತ್ತಿ ಪ್ರವೇಶಿಸಲು ಪ್ರವೇಶ ಬಿಂದುಗಳಾಗಿ ಕಾರ್ಯನಿರ್ವಹಿಸುವ ಪರೀಕ್ಷೆಗಳು, ಮುಖ್ಯವಾಗಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯು ವಿಶೇಷ ಚೇತನ ಪರೀಕ್ಷಾರ್ಥಿಗಳು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಪರಿಗಣಿಸದೆ ಸಾಮಾನ್ಯ ಪರೀಕ್ಷಾರ್ಥಿಗಳ ಹೋಲಿಕೆಯಲ್ಲಿ ಅನನುಕೂಲಕರ ಸನ್ನಿವೇಶದಲ್ಲಿರಿಸುತ್ತದೆ” ಎಂದು ಹೇಳಿದರು.