ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 09-09-2021

Bar & Bench

ಮಹಾರಾಷ್ಟ್ರ ಸದನ ಹಗರಣ: ಸಚಿವ ಛಗನ್‌ ಭುಜ್‌ಬಲ್‌ ರನ್ನು ಖುಲಾಸೆಗೊಳಿಸಿದ ಮುಂಬೈ ನ್ಯಾಯಾಲಯ

ಮಹಾರಾಷ್ಟ್ರ ಸದನ ಹಗರಣದಲ್ಲಿ ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವ ಛಗನ್‌ ಭುಜ್‌ಬಲ್‌ ಅವರನ್ನು ಮುಂಬೈ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. 2015ರಿಂದ ಸದರಿ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ ನಡೆಸಿತ್ತು. ತಾನು ಉಪ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವನಾಗಿದ್ದಾಗ ಯಾವುದೇ ತೆರನಾದ ಅಕ್ರಮವನ್ನು ಎಸಗಿಲ್ಲ. ಇದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ ಎಂದು ಭುಜ್‌ಬಲ್‌ ಮನವಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಎಚ್‌ ಎಸ್ ಸತ್ಭಾಯಿ ಆದೇಶ ಹೊರಡಿಸಿದ್ದಾರೆ.

Chhagan Bhujbal

ಪುತ್ರ ಪಂಕಜ್‌ ಮತ್ತು ಸಂಬಂಧಿ ಸಮೀರ್‌ ಹಾಗೂ ಇತರೆ ಐದು ಮಂದಿ ವಿರುದ್ಧದ ಆರೋಪಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಪ್ರಾದೇಶಿಕ ಸಾರಿಗೆ ಕಚೇರಿಗೆ ಸೇರಿದ್ದ ಸ್ಥಳದಲ್ಲಿ ಯೋಜನೆಯೊಂದಕ್ಕೆ ಭುಜ್‌ಬಲ್ ನೆರವು ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ 2015ರಲ್ಲಿ ಅವರೂ ಸೇರಿದಂತೆ ಇತರೆ 16 ಮಂದಿ ವಿರುದ್ಧ ದೂರು ದಾಖಲಿಸಲಾಗಿತ್ತು. ದೆಹಲಿಯಲ್ಲಿ ಮಹಾರಾಷ್ಟ್ರ ಸದನ ಮತ್ತು ಮುಂಬೈನಲ್ಲಿ ಆರ್‌ಟಿಒ ಕಟ್ಟಡ ನಿರ್ಮಾಣವನ್ನು ಡೆವಲಪರ್‌ ಒಬ್ಬರಿಗೆ ನೀಡಲಾಗಿತ್ತು. ಈ ಡೆವಲಪರ್‌ರಿಂದ ಭುಜ್‌ಬಲ್‌ ಮತ್ತು ಅವರ ಕುಟುಂಬ ಸದಸ್ಯರು ಲಂಚ ಪಡೆದಿದ್ದಾರೆ ಎಂಬ ಆರೋಪ ಮಾಡಲಾಗಿತ್ತು.

ರಾಜ್ಯ ಪಟ್ಟಿಯಿಂದ ಸಮವರ್ತಿ ಪಟ್ಟಿಗೆ ಶಿಕ್ಷಣದ ವರ್ಗಾವಣೆ ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಶಿಕ್ಷಣವನ್ನು ರಾಜ್ಯ ಪಟ್ಟಿಯಿಂದ ಸಮವರ್ತಿ ಪಟ್ಟಿಗೆ ವರ್ಗಾಯಿಸುವುದಕ್ಕೆ ಸೀಮಿತವಾಗಿ ಸಂವಿಧಾನಕ್ಕೆ ತರಲಾಗಿರುವ 42ನೇ ತಿದ್ದುಪಡಿಯನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ಸಲ್ಲಿಸಲಾಗಿದೆ. ಡಿಎಂಕೆ ಶಾಸಕರೂ ಆಗಿರುವ ಡಾ. ಎಳಿಲನ್‌ ನಾಗನಾಥನ್‌ ಅವರು ಆರಮ್‌ ಸೆಯ್ಯಾ ವಿರುಂಬು ಟ್ರಸ್ಟ್‌ ಮೂಲಕ ಮನವಿ ಸಲ್ಲಿಸಿದ್ದಾರೆ.

Kids

ಸಂವಿಧಾನ (42ನೇ ತಿದ್ದುಪಡಿ) ಕಾಯಿದೆ 1976ರ ಸೆಕ್ಷನ್‌ 57ರ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿದ್ದು, ಇದರಲ್ಲಿ ಸಂವಿಧಾನದ ಏಳನೇ ಷೆಡ್ಯೂಲ್‌ನ ಪಟ್ಟಿ II ರಲ್ಲಿರುವ (ರಾಜ್ಯ ಪಟ್ಟಿ) 11ನೇ ನಮೂದನ್ನು (ಶಿಕ್ಷಣದ ವಿಷಯ) ತೆಗೆದುಹಾಕಲಾಗಿದ್ದು, ಅದನ್ನು ಷೆಡ್ಯೂಲ್‌ನ ಪಟ್ಟಿ IIIಕ್ಕೆ (ಸಮವರ್ತಿ ಪಟ್ಟಿ) ವರ್ಗಾಯಿಸಲಾಗಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆಯಾಗಿದ್ದ ಅಸಾಂವಿಧಾನಿ ಎಂದು ಆರೋಪಿಸಿದ್ದಾರೆ.