Minister N Chaluvaraya Swamy
Minister N Chaluvaraya Swamy 
ಸುದ್ದಿಗಳು

ಸಚಿವ ಚಲುವರಾಯ ಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ: ಇಬ್ಬರು ಕೃಷಿ ಅಧಿಕಾರಿಗಳು ಮೂರು ದಿನ ಸಿಐಡಿ ವಶಕ್ಕೆ

Bar & Bench

ಮಂಡ್ಯ ಜಿಲ್ಲಾ ಉಸ್ತುವಾರಿಯೂ ಆಗಿರುವ ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೈಸೂರು ಜಿಲ್ಲೆ ಕೆ ಆರ್‌ ನಗರ ತಾಲ್ಲೂಕಿನ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಮಂಡ್ಯದ ನ್ಯಾಯಾಲಯವು ಆಗಸ್ಟ್‌ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಸೋಮವಾರ ಒಪ್ಪಿದೆ.

ಸಿಐಡಿ ಅಧಿಕಾರಿಗಳು ಸುದೀರ್ಘ ವಿಚಾರಣೆಯ ಬಳಿಕ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್‌ ಮತ್ತು ಕೃಷಿ ಅಧಿಕಾರಿ ಸುದರ್ಶನ್‌ ಅವರನ್ನು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದರು. ಇಂದು ಬೆಳಿಗ್ಗೆ ಅವರನ್ನು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಬಿ ವಿಜಯಕುಮಾರ್‌ ರೈ ಅವರ ಮುಂದೆ ಹಾಜರುಪಡಿಸಿದರು. ಪ್ರಕರಣದ ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿಗಳನ್ನು ಮೂರು ದಿನ ಸಿಐಡಿ ಪೊಲೀಸರ ಕಸ್ಟಡಿಗೆ ನೀಡಿದ್ದಾರೆ.

ಆರೋಪಿತ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳ ಕೃಷಿ ಸಹಾಯಕ ನಿರ್ದೇಶಕರ ಹೆಸರಿನಲ್ಲಿ ನಕಲಿ ಪತ್ರವನ್ನು ರಾಜ್ಯಪಾಲರಿಗೆ ಬರೆದಿದ್ದರು. ಪ್ರತಿ ತಿಂಗಳು 6-8 ಲಕ್ಷ ರೂಪಾಯಿ ಲಂಚ ನೀಡಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿ, ನಕಲಿ ಸಹಿ ಮಾಡಿದ್ದರು.

ಈ ಸಂಬಂಧ ವಿರೋಧ ಪಕ್ಷಗಳು ಟೀಕಾಪ್ರಹಾರ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಮೈಸೂರಿನ ಸರಸ್ವತಿ ಪುರಂ ಕಚೇರಿಯಿಂದ ಪತ್ರವನ್ನು ರಿಜಿಸ್ಟರ್‌ ಪೋಸ್ಟ್‌ ಮೂಲಕ ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು.