Arun Mishra Indira Banerjee Vineet Saran MR Shah and Ravindra Bhat
Arun Mishra Indira Banerjee Vineet Saran MR Shah and Ravindra Bhat 
ದಾವೆ

ಎನ್‌ಡಿಪಿಎಸ್ ಕಾಯ್ದೆ: ಮಾಹಿತಿದಾರ ಮತ್ತು ತನಿಖಾಧಿಕಾರಿ ಒಬ್ಬರೇ ಆಗಿರಬಹುದೇ?

Bar & Bench

ಮಾದಕವಸ್ತು ಮತ್ತು ಅಮಲುಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌) ಅಡಿಯಲ್ಲಿ ಆರೋಪಿಯಾದ ವ್ಯಕ್ತಿಯು ಮಾಹಿತಿದಾರ ಮತ್ತು ತನಿಖಾ ಅಧಿಕಾರಿ ಒಬ್ಬರೇ ಆಗಿದ್ದಾರೆ ಎಂಬ ಕಾರಣಕ್ಕೆ ಖುಲಾಸೆಯಾಗಲು ಅರ್ಹನಲ್ಲ ಎಂದು ಸೋಮವಾರ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.

ಮಾಹಿತಿದಾರನೇ ತನಿಖಾಧಿಕಾರಿಯಾದರೆ ಎನ್‌ಡಿಪಿಎಸ್ ಕಾಯ್ದೆ ಅಡಿ ತನಿಖೆಯು ಹಾದಿ ತಪ್ಪುತ್ತದೆಯೇ ಎಂಬ ಪ್ರಶ್ನೆಯ ಕುರಿತು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂ ಆರ್ ಷಾ ಮತ್ತು ರವೀಂದ್ರ ಭಟ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿತು.

ಮಾಹಿತಿದಾರ ಮತ್ತು ತನಿಖಾಧಿಕಾರಿ ಒಬ್ಬರೇ ಆಗಿರುವಾಗ ತಾನೇತಾನಾಗಿಯೇ ಪಕ್ಷಪಾತದ ಆತಂಕ ಉದ್ಭವಿಸುವುದಿಲ್ಲ ಮತ್ತು ಆಯಾ ಪ್ರಕರಣಗಳ ಆಧಾರದಲ್ಲಿ ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿತು.

ಮಾಹಿತಿದಾರ ಮತ್ತು ತನಿಖಾಧಿಕಾರಿ ಒಬ್ಬರೇ ಆದರೆ ವಿಚಾರಣೆ ಹಾದಿ ತಪ್ಪುತ್ತದೆ ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಮೋಹನ್ ಲಾಲ್ v.ಪಂಜಾಬ್ ರಾಜ್ಯ ಪ್ರಕರಣದಲ್ಲಿ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತೀರ್ಪು ಪ್ರಕಟಿಸಿದ್ದರು. ಆದರೆ, ಈ ತೀರ್ಪು ಪ್ರಕಟವಾದ ದಿನದಂದಿನವರೆಗೆ ವಿಚಾರಣೆ ಮತ್ತು ಮನವಿಗೆ ಬಾಕಿ ಇರುವ ಪ್ರಕರಣಗಳಿಗೆ ಇದರ ಫಲ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿತ್ತು.

ಮೋಹಲ್ ಲಾಲ್ ಪ್ರಕರಣದ ತೀರ್ಪಿನ ಸಮಂಜಸತೆಯ ಬಗ್ಗೆ ಮುಕೇಶ್ ಸಿಂಗ್ v.ಸ್ಟೇಟ್ (ದೆಹಲಿಯ ಮಾದಕವಸ್ತು ವಿಭಾಗ) ಪ್ರಕರಣದಲ್ಲಿ ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಲಾಗಿತ್ತು. ಸದರಿ ಪ್ರಕರಣದ ಕುರಿತು ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಎಂ ಆರ್ ಷಾ ನೇತೃತೃತ್ವದ ವಿಭಾಗೀಯ ಪೀಠ ಹೀಗೆ ಹೇಳಿತ್ತು:

“ಮೋಹನ್‌ ಲಾಲ್ ಪ್ರಕರಣದಲ್ಲಿನ ನಿಲುವಿನ ಕುರಿತು ನಾವು ಗೌರವಯುತವಾಗಿ ಭಿನ್ನಾಭಿಪ್ರಾಯ ಹೊಂದಿದ್ದೇವೆ. ಈ ಪ್ರಕರಣದ ಕುರಿತು ಕನಿಷ್ಠ ತ್ರಿಸದಸ್ಯ ಪೀಠ ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ಪ್ರಕರಣದ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯ ಮುಂದೆ ಮಂಡಿಸಲು ರಿಜಿಸ್ಟ್ರಿಗೆ ನಿರ್ದೇಶಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನಿರ್ದಿಷ್ಟ ನ್ಯಾಯಪೀಠವನ್ನು ರಚಿಸಲಿದ್ದಾರೆ”.

ಆ ಬಳಿಕ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ರಂಜಿತ್ ಕುಮಾರ್‌ ಅವರು ಅಮಿಕಸ್ ಕ್ಯೂರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.