Sr Adv Indira Jaising
Sr Adv Indira Jaising 
ಸುದ್ದಿಗಳು

ತನ್ನ ತೀರ್ಪನ್ನೇ ಸುಪ್ರೀಂ ಜಾರಿಗೊಳಿಸದಿದ್ದರೆ ಬೇರೆಯವರು ಹೇಗೆ ಗೌರವಿಸುತ್ತಾರೆ? ಕಲಾಪ ನೇರಪ್ರಸಾರ ಕುರಿತು ಜೈಸಿಂಗ್

Bar & Bench

ಸಾಂವಿಧಾನಿಕ ಮಹತ್ವದ ಪ್ರಕರಣಗಳ ನೇರ ಪ್ರಸಾರ ಕುರಿತು ತಾನು ನೀಡಿದ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್‌ ಕ್ರಮ ಕೈಗೊಳ್ಳದಿರುವ ಬಗ್ಗೆ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ವಿಷಾದ ವ್ಯಕ್ತಪಡಿಸಿದರು.

ಭಾನುವಾರ ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಹಿರಿಯ ವಕೀಲ ಸಂಜೋಯ್ ಘೋಷ್ ವಿರಚಿತ ʼಹೌ ಗೌರಂಗೊ ಲಾಸ್ಟ್ ಹಿಸ್ ಒʼ ಕೃತಿ ಬಿಡುಗಡೆ ಸಮಾರಂಭದ ವೇಳೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಲ್ಕು ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟ್, ತನ್ನ ತಾರ್ಕಿಕ ತೀರ್ಪೊಂದರಲ್ಲಿ ಲೈವ್-ಸ್ಟ್ರೀಮಿಂಗ್ ಮೂಲಭೂತ ಹಕ್ಕನ್ನು ಹೋಲುತ್ತದೆ ಎಂದಿತ್ತು ಆದರೆ ಅದನ್ನು ಇದುವರೆಗೂ ಜಾರಿಗೆ ತಂದಿಲ್ಲ ಎಂದರು.

“ಈವರೆಗೂ ಸುಪ್ರೀಂ ಕೋರ್ಟ್ ಆ ನಿಯಮಗಳನ್ನು ರೂಪಿಸಿಲ್ಲ, ನೇರ ಪ್ರಸಾರ ಮಾಡಿಲ್ಲ. ನೀವೇನಾದರೂ ಪ್ರಶ್ನಿಸಿದರೆ ಇದರಿಂದ ನಿರಾಶೆಯಾಗಿದೆ ಎಂದೇ ನಾನು ಹೇಳುತ್ತೇನೆ. ತಾನೇ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಜಾರಿಗೊಳಿಸದಿದ್ದರೆ ಉಳಿದವರು ಹೇಗೆ ನ್ಯಾಯಾಲಯವನ್ನು ಗೌರವಿಸುತ್ತಾರೆ?” ಎಂದು ಅವರು ಪ್ರಶ್ನಿಸಿದರು.

ನ್ಯಾಯಾಂಗದ ಬಗೆಗಿನ ಸಾರ್ವಜನಿಕರ ಗ್ರಹಿಕೆ ಬಗ್ಗೆ ನ್ಯಾಯಾಧೀಶರಿಗೆ ಅರಿವು ಇರುತ್ತದೆಯೇ ಎಂಬ ಪ್ರಶ್ನೆಗೆ ಜೈಸಿಂಗ್‌ ಪ್ರತಿಕ್ರಿಯಿಸುತ್ತಾ ಈ ಮಾತುಗಳನ್ನಾಡಿದರು. ಕಲಾಪ ನೇರ ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವರಲ್ಲಿ ಇಂದಿರಾ ಕೂಡ ಒಬ್ಬರು. ಪ್ರಕರಣಗಳ ನೇರ ಪ್ರಸಾರ ಕೋರಿ ತಾನು ಅರ್ಜಿ ಸಲ್ಲಿಸಿದ್ದರ ಹಿಂದೆ ತಪ್ಪು ಮಾಹಿತಿ ಹರಡುವುದನ್ನು ತಡೆಯುವುದು ಕೂಡ ಒಂದು ಕಾರಣವಾಗಿತ್ತು ಎಂದು ಇಂದಿರಾ ಒತ್ತಿ ಹೇಳಿದ್ದಾರೆ.

"ಟ್ವೀಟ್‌ಗಳಿಗೆ ಸಂಬಂಧಿಸಿದಂತೆ, ಇಂದು ಅವುಗಳನ್ನು ಈಗಾಗಲೇ ನೋಡುತ್ತೇವೆ. ಪ್ರತಿಯೊಂದು ಕಾನೂನು ಜಾಲತಾಣ ಕೂಡ ವಿಚಾರಣೆ ನಡೆಯುತ್ತಿರುವಂತೆಯೇ ರಿಯಲ್‌ ಟ್ವೀಟ್‌ ಮಾಡುತ್ತಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯುವುದು ಕೂಡ ನಾನು ಅರ್ಜಿಯನ್ನು ಸಲ್ಲಿಸಿದರ ಹಿಂದಿನ ಕಾರಣಗಳಲ್ಲಿ ಒಂದಾಗಿತ್ತು” ಎಂದು ಅವರು ತಿಳಿಸಿದರು.