Eknath Shinde and Bombay High Court
Eknath Shinde and Bombay High Court  Facebook
ಸುದ್ದಿಗಳು

ಮಹಾರಾಷ್ಟ್ರ ಬೇಗುದಿ: ಶಿಂಧೆ, ಬಂಡಾಯ ಶಾಸಕರು ಮಹಾರಾಷ್ಟ್ರಕ್ಕೆ ಮರಳಲು ಸೂಚಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

Bar & Bench

ಶಿವಸೇನಾದ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಕೂಡಲೇ ಗುವಾಹಟಿಯಿಂದ ರಾಜ್ಯಕ್ಕೆ ಮರಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ [ಉತ್ಪಲ್ ಚಂದಾವರ್ ಮತ್ತು ಏಕನಾಥ್ ಶಿಂಧೆ ನಡುವಣ ಪ್ರಕರಣ].

ಸಾರ್ವಜನಿಕ ಹಕ್ಕುಗಳು ಮತ್ತು ಉತ್ತಮ ಆಡಳಿತಕ್ಕೆ ಅಗೌರವ ತೋರಿದ ಬಂಡಾಯ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲರಾದ ಅಸಿಮ್ ಸರೋದೆ ಮತ್ತು ಅಜಿಂಕ್ಯ ಉದನೆ ಅವರ ಮೂಲಕ ಉತ್ಪಲ್ ಚಂದಾವರ್ ಅವರು ಸಲ್ಲಿಸಿರುವ ಪಿಐಎಲ್‌ ಕೋರಿದೆ.

ಇಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮಕರಂದ್ ಕಾರ್ಣಿಕ್ ಅವರ ಪೀಠದೆದುರು ಅರ್ಜಿ ಉಲ್ಲೇಖಿಸಲಾಗಿದ್ದು, ಪ್ರಕರಣವನ್ನು ಶೀಘ್ರದಲ್ಲೇ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಅರ್ಜಿಯ ಪ್ರಮುಖಾಂಶಗಳು

  • ಅಧಿಕಾರ ಹಿಡಿಯಲು ಮತ್ತು ವಿರೋಧಿಗಳಿಗೆ ಪಾಠ ಕಲಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದು ರಾಷ್ಟ್ರ ಮತ್ತು ರಾಜ್ಯಕ್ಕೆ ತೋರಿಸುವಂತೆ ಚುನಾಯಿತ ಪ್ರತಿನಿಧಿಗಳ ಗುಂಪೊಂದರಿಂದ ಕೊಳಕು ರಾಜಕೀಯ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಜನ ನಾಯಕರನ್ನು ಆಯ್ಕೆ ಮಾಡಿರುವುದು ಇಂತಹ ರಾಜಕೀಯ ನಾಟಕ ಮಾಡಲಿ ಮತ್ತು ಸಾರ್ವಜನಿಕ ಹಕ್ಕುಗಳನ್ನು ಕಡೆಗಣಿಸಲಿ ಎಂದಲ್ಲ.

  • ರಾಜಕೀಯ ನಾಯಕ ಅಥವಾ ಪಕ್ಷದ ಬಂಡಾಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಬದಲಿಗೆ ಇದು ರಾಜ್ಯದಲ್ಲಿ ನಿರಂತರ ರಾಜಕೀಯ ಅಸ್ಥಿರತೆಯನ್ನು ಧ್ಯಾನಿಸುತ್ತದೆ. ಇದರಿಂದ ಪ್ರಜೆಗಳಲ್ಲಿ ಅಭದ್ರತೆಯ ಭಾವನೆ ಮೂಡುತ್ತದೆ.

  • ರಾಜಕೀಯ ನಾಯಕ ಅಥವಾ ಪಕ್ಷದ ಬಂಡಾಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಆದರೆ ರಾಜ್ಯದಲ್ಲಿನ ನಿರಂತರ ರಾಜಕೀಯ ಅಸ್ಥಿರತೆಗೆ ಮಾತ್ರ ಈ ಬೆಳವಣಿಗೆ ಇಂಬು ನೀಡುತ್ತದೆ.

  • ಐಪಿಸಿ ಸೆಕ್ಷನ್ 268ರ ಪ್ರಕಾರ ರಾಜಕೀಯ ತೊಂದರೆ ಸಾರ್ವಜನಿಕರ ಮೇಲೂ ಪರಿಣಾಮ ಬೀರುವುದರಿಂದ ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ, ಶಿವಸೇನಾ ಶಾಸಕರ ಬಂಡಾಯ ಮತ್ತು ಅದರ ಪರಿಣಾಮದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ 'ಕಾನೂನಿನ ಪ್ರಶ್ನೆ'ಯನ್ನು ನಿರ್ಧರಿಸಬೇಕು.

  • ಚುನಾಯಿತ ಪ್ರತಿನಿಧಿಗಳು ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ, ಸಾರ್ವಜನಿಕ ಹಣವನ್ನು ಚಾರ್ಟರ್ಡ್ ವಿಮಾನಗಳಲ್ಲಿ ಪ್ರಯಾಣಿಸಲು ಮತ್ತು ಐಷಾರಾಮಿ ಪಂಚತಾರಾ ಹೋಟೆಲ್‌ಗಳಲ್ಲಿ ವಾಸಿಸಲು ಬಳಸುತ್ತಿದ್ದಾರೆಯೇ ಎಂಬುದನ್ನು ಜನರಿಗೆ ತಿಳಿಯಪಡಿಸುವುದು ಸೂಕ್ತ.

  • ಬಂಡಾಯ ಎದ್ದವರಲ್ಲಿ ವಿವಿಧ ಸಚಿವರು ಕೂಡ ಇದ್ದು ಮಳೆಗಾಲದಲ್ಲಿ ಬಹುತೇಕ ನಗರಗಳು ಸಮಸ್ಯೆ ಎದುರಿಸುತ್ತಿರುವಾಗ 37 ಶಾಸಕರೊಂದಿಗೆ ನಗರಾಭಿವೃದ್ಧಿ ಸಚಿವ ಶಿಂಧೆ ಅವರು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯಿಂದ ಪಲಾಯನ ಮಾಡಿದ್ದಾರೆ. ಇದರಿಂದ ಸಾರ್ವಜನಿಕ ಹಕ್ಕುಗಳಿಗೆ ಅಡ್ಡಿಯಾಗಿದೆ.

  • ಪ್ರಸ್ತುತ ಋತು ರೈತರಿಗೆ ಬಹಳ ನಿರ್ಣಾಯಕವಾಗಿದ್ದು ಸಂಬಂಧಿಸಿದ ಕೃಷಿ ಸಚಿವರು ಹಲವು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ದುರದೃಷ್ಟವಶಾತ್‌ ಸಚಿವ ದಾದಾ ಭೂಸೆ ಅವರು ಗುವಾಹಟಿಯಲ್ಲಿದ್ದಾರೆ.