Justice A Badharudeen
Justice A Badharudeen 
ಸುದ್ದಿಗಳು

ವಿವಾಹವಾಗದ ವಯಸ್ಕ ಪುತ್ರಿ ಮಾನಸಿಕ ಅಥವಾ ದೈಹಿಕ ಅಸ್ವಸ್ಥತೆ ಇರದ ವಿನಾ ಜೀವನಾಂಶ ಪಡೆಯಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

Bar & Bench

ವಿವಾಹವಾಗದ ವಯಸ್ಕ ಪುತ್ರಿ ಜೀವನ ನಡೆಸಲು ಸಾಧ್ಯವಾಗದ ಮಾನಸಿಕ ಅಥವಾ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿರದ ವಿನಾ ಆಕೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ [ಗಿರೀಶ್ ಕುಮಾರ್ ಎನ್  ಮತ್ತು ರಜಿನಿ ಕೆ ವಿ ಇನ್ನಿತರರ ನಡುವಣ ಪ್ರಕರಣ].

ಈ ಅಂಶಗಳು ಕಂಡುಬರದಿದ್ದರೆ ವಯಸ್ಕ ಅವಿವಾಹಿತ ಮಗಳು ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ವಿವರಿಸಿದರು.

“ಕಾನೂನಿನ ನಿಲುವು ಏನೆಂದರೆ ಸಿಆರ್‌ಪಿಸಿ ಸೆಕ್ಷನ್‌ 125 (1)ರ ಪ್ರಕಾರ ವಯಸ್ಕ ಅವಿವಾಹಿತ ಮಗಳು ಸಾಮಾನ್ಯವಾದ ಸನ್ನಿವೇಶಗಳಲ್ಲಿ, ತನಗೆ ಬದುಕಲು ಬೇರೆ ಆಧಾರವಿಲ್ಲ ಎನ್ನುವುದೊಂದೇ ಕಾರಣದಿಂದ ಜೀವನಾಂಶವನ್ನು ಕೋರಲಾಗದು. ಇದೇ ವೇಳೆ ಮದುವೆಯಾಗದ ವಯಸ್ಕ ಹೆಣ್ಣುಮಗಳು  ಯಾವುದೇ ದೈಹಿಕ ಅಥವಾ ಮಾನಸಿಕ ಅಸಹಜತೆ ಅಥವಾ ಘಾಸಿಗೆ ಒಳಗಾಗಿದ್ದರೆ ಆಗ ಆಕೆ ಮನವಿ ಮತ್ತು ಸಾಕ್ಷ್ಯಗಳನ್ನು ಕಡ್ಡಾಯವಾಗಿ ಸಲ್ಲಿಸುವ ಮೂಲಕ ಪರಿಹಾರ ಪಡೆಯಬಹುದು” ಎಂದು ನ್ಯಾಯಾಲಯ ಹೇಳಿದೆ.  

ಆದರೆ ತನ್ನ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಹಿಂದೂ ಅವಿವಾಹಿತ ಮಗಳು 1956 ರ ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯಡಿ (ದತ್ತು ತೆಗೆದುಕೊಂಡ ಪ್ರಕರಣಗಳಲ್ಲಿ) ಸಾಬೀತುಪಡಿಸಿದರೆ ಆಕೆ ಜೀವನಾಂಶ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.

ಮದುವೆಯಾಗದ ಹಿಂದೂ ಪುತ್ರಿ 1956ರ ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯ ಸೆ.20 (3) ರಡಿ ತಾನು ಮದುವೆಯಾಗುವವರೆಗೆ ಜೀವನ ನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿ ತಂದೆಯಿಂದ ಜೀವನಾಂಶ ಪಡೆಯಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು

ತನ್ನ ಪತ್ನಿಗೆ ₹ 10,000 ಮತ್ತು 17 ವರ್ಷ ವಯಸ್ಸಿನ ಮಗಳಿಗೆ ₹ 8,000 ಜೀವನಾಂಶ ನೀಡುವಂತೆ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ 2016ರ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿತು.