BMRCL and Karnataka HC
BMRCL and Karnataka HC 
ಸುದ್ದಿಗಳು

ಮೆಟ್ರೊ ಕಾಮಗಾರಿ: ಗಿಡ ನೆಟ್ಟಿರುವುದು, ಮರ ಸ್ಥಳಾಂತರ ಕುರಿತು ಸಂಕ್ಷಿಪ್ತ ವರದಿ ಸಲ್ಲಿಸಲು ಹೈಕೋರ್ಟ್‌ ಆದೇಶ

Bar & Bench

ಬೆಂಗಳೂರಿನ ಯಾವೆಲ್ಲಾ ಪ್ರದೇಶಗಳಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ, ಎಷ್ಟು ಮರಗಳನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಒಳಗೊಂಡ ಸಂಕ್ಷಿಪ್ತ ವರದಿ ಸಲ್ಲಿಸಲು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ (ಬಿಎಂಆರ್‌ಸಿಎಲ್‌) ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಬೆಂಗಳೂರು ಪರಿಸರ ಟ್ರಸ್ಟ್‌ ಮತ್ತು ಪರಿಸರ ತಜ್ಞ ದತ್ತಾತ್ರೇಯ ಟಿ ದೇವರು ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು  ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಪ್ರತಿವಾದಿಗಳು ಅನುಪಾಲನಾ/ಪ್ರತ್ಯುತ್ತರ ವರದಿ ಸಲ್ಲಿಸಿದ್ದು, ಅವುಗಳು ಬೃಹತ್‌ ಗಾತ್ರದಲ್ಲಿವೆ. ಪ್ರತಿವಾದಿಗಳು ವರದಿ/ಮೆಮೊಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನು ನವೆಂಬರ್‌ 18ರ ಒಳಗೆ ಸಲ್ಲಿಸಬೇಕು. ವಿಚಾರಣೆಯನ್ನು ನವೆಂಬರ್‌ 22ಕ್ಕೆ ಮುಂದೂಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರದೀಪ್‌ ನಾಯಕ್‌ ಅವರು “10 ಸಾವಿರ ಗಿಡ ನೆಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಆದರೆ, ಅವುಗಳ ಸ್ಥಿತಿಗತಿ ಏನಾಗಿದೆ ಎಂಬ ಯಾವುದೇ ಮಾಹಿತಿ ಲಭ್ಯವಿಲ್ಲ” ಎಂದು ಪೀಠದ ಗಮನಸೆಳೆದರು.

ಇದಕ್ಕೆ ಬಿಎಂಆರ್‌ಸಿಎಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಬಸವರಾಜ ಸೊಬರದಮಠ ಅವರು ಸುದೀರ್ಘ ಸಮಜಾಯಿಷಿ ನೀಡಿದರು.

ಆಗ ಪೀಠವು “ಮರಗಳನ್ನು ಕಡಿಯಬೇಕಾದರೆ ಕಡಿಯಬಹುದು. ಆದರೆ, ಒಂದು ಮರ ಕಡಿದರೆ ಅದಕ್ಕೆ ಪರ್ಯಾಯವಾಗಿ 10 ಗಿಡ ನೆಡಬೇಕು. ಹೀಗೆ ಮಾಡುವುದರಿಂದ ನಗರದ ಹಸಿರು ಹೊದಿಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಮೂಲಕ ಪರಿಸರ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿದಂತಾಗುತ್ತದೆ. ಪ್ರಜ್ಞಾಪೂರ್ವಕ ಕ್ರಮದ ಮೂಲಕ ನೀವು (ಬಿಎಂಆರ್‌ಸಿಎಲ್‌) ಅದನ್ನು ಮಾಡಿ ತೋರಿಸಬೇಕು” ಎಂದು ಪೀಠ ಹೇಳಿತು.

“ಎಲ್ಲೆಲ್ಲಿ ಗಿಡ ನೆಡಲಾಗಿದೆ. ಗಿಡ ನೆಟ್ಟಿರುವುದನ್ನು ಯಾವ ಪ್ರಾಧಿಕಾರ ಪರಿಶೀಲಿಸಿದೆ. ಅದಕ್ಕೆ ಒಪ್ಪಿಗೆ ನೀಡಿರುವುದು, ನಿರ್ದಿಷ್ಟ ಪ್ರದೇಶದಲ್ಲಿ ನೆಡಲಾಗಿರುವ ಗಿಡಗಳ ಸಂಖ್ಯೆಯನ್ನು ಒಳಗೊಂಡ ಸಂಕ್ಷಿಪ್ತ ವರದಿಯನ್ನು ಸಲ್ಲಿಸಿ. ಅದನ್ನು ಪರಿಶೀಲಿಸಿ ನಾವು ನಿಮ್ಮ ಕೋರಿಕೆಯನ್ನು ಪರಿಗಣಿಸುತ್ತೇವೆ. ಕಾಮಗಾರಿಗೆ ಮಧ್ಯಂತರ ತಡೆ ನೀಡಲಾಗಿಲ್ಲ. ಹೀಗಾಗಿ, ಗಿಡ ನೆಟ್ಟಿರುವುದು, ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಬೇಕು” ಎಂದು ಪೀಠವು ಬಿಎಂಆರ್‌ಸಿಎಲ್‌ಗೆ ಮೌಖಿಕವಾಗಿ ಸೂಚಿಸಿತು.