ದಾವಣಗೆರೆ ಜಿಲ್ಲೆಯ ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಮೂರು ಕೋಟಿಗಿಂತಲೂ ಅಧಿಕ ರೂಪಾಯಿ ಮೌಲ್ಯದ ಸರಕು-ಸಾಮಗ್ರಿಯ ಕೊರತೆ ಸೃಷ್ಟಿಸಿ, ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಆರೋಪಿ ಅಂಗವಿಕಲನಾಗಿರುವ ಅಂಶ ಪರಿಗಣಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಬಂಧನ ಭೀತಿ ಎದುರಾಗಿದ್ದ ಕಾರಣಕ್ಕೆ ಆರೋಪಿ ಜಿ ಎನ್ ಅರುಣ್ ಕುಮಾರ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿದಾರ ಆರೋಪಿ ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ. 2024ರ ಮೇ 18ರಿಂದ 2024ರ ಮೇ 31ರ ಮಧ್ಯೆ ಉಗ್ರಾಣದಲ್ಲಿ ಆಂತರಿಕ ಲೆಕ್ಕ ಪರಿಶೋಧನೆ ನಡೆದಿತ್ತು. ಈ ಸಂದರ್ಭದಲ್ಲಿ ಅರುಣ್ ಕರ್ತವ್ಯಕ್ಕೆ ಗೈರಾಗಿದ್ದರು. ಲೆಡ್ಜರ್ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ₹56,67,864 ಮೌಲ್ಯದ 89,270 ಲೀಟರ್ ಪರಿವರ್ತಕ ಎಣ್ಣೆ ಸೇರಿದಂತೆ ₹3 ಕೋಟಿಗೂ ಅಧಿಕ ಮೌಲ್ಯದ ಸರಕು-ಸಾಮಾಗ್ರಿಗಳು ಕೊರತೆಯಾಗಿದೆ ಎಂಬುದು ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಬೆಸ್ಕಾಂ ಕಾರ್ಯಕಾರಿ ಎಂಜಿನಿಯರ್ ರವಿ ಕಿರಣ್ 2025ರ ಸೆಪ್ಟೆಂಬರ್ 29ರಂದು ಹರಿಹರ ಟೌನ್ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಬೆಸ್ಕಾಂ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪ ಅರ್ಜಿದಾರನ ಮೇಲಿದೆ. ತಾನು ಅಂಗವಿಕಲನಾಗಿದ್ದು, ಪ್ರಕರಣದ ತನಿಖೆಗೆ ಸಹಕರಿಸುತ್ತೇನೆ ಹಾಗೂ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತು ಪಾಲಿಸುವುದಾಗಿ ಆರೋಪಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಗಲ್ಲು ಅಥವಾ ಜೀವಾವಧಿ ಶಿಕ್ಷೆ ವಿಧಿಸುವಂತಹ ಗಂಭೀರ ಅಪರಾಧಗಳು ಅರ್ಜಿದಾರನ ಮೇಲಿಲ್ಲ. ಆತ ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆ ಹೊಂದಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ನಂತರ ಅರ್ಜಿದಾರರನ್ನು ಬಂಧನ ಮಾಡಿದರೆ, ಹರಿಹರ ಠಾಣಾ ಪೊಲೀಸರು ಆತನಿಂದ ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿ ಪಡೆದು ಜಾಮೀನು ಮೇಲೆ ಬಿಡುಗಡೆ ಮಾಡಬೇಕು. ಆರೋಪಿ ತನಿಖೆಗೆ ಸಹಕರಿಸಬೇಕು. ದೂರುದಾರ ಅಥವಾ ಸಾಕ್ಷಿಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆದರಿಸಬಾರದು. ಎರಡು ತಿಂಗಳ ಕಾಲ ಅಥವಾ ಪ್ರಕರಣದ ಅಂತಿಮ ತನಿಖಾ ವರದಿ ಸಲ್ಲಿಸುವವರೆಗೆ ಪ್ರತಿ ತಿಂಗಳ ಮೊದಲ ಹಾಗೂ ಎರಡನೇ ಭಾನುವಾರದಂದು ತನಿಖಾಧಿಕಾರಿಯ ಮುಂದೆ ಆರೋಪಿ ಹಾಜರಾಗಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಠಾಣೆಯಲ್ಲಿ ಅರುಣ್ ಕುಮಾರ್ ವಿರುದ್ಧ ಬಿಎನ್ಎಸ್ ಸೆಕ್ಷನ್ಗಳಾದ 316(2), 316(4), 316(5), 318(4) ಜೊತೆಗೆ 3(5) ಅಡಿ ಪ್ರಕರಣ ದಾಖಲಿಸಲಾಗಿದೆ.